ಕಬಿನಿ‌ ಜಲಾಶಯಕ್ಕೆ ಹೆಚ್ಚದ ಒಳಹರಿವು: ಕುಸಿಯುತ್ತಿದೆ ನೀರಿನ ಮಟ್ಟ.

ಮೈಸೂರು,ಮೇ,15,2024 (www.justkannada.in): ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಕೊಂಚ ನಿರಾಳವೆನಿಸಿದೆ. ಈ ಮಧ್ಯೆ ಕೇರಳದ ವೈನಾಡು ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ‌ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿಲ್ಲ. ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

ಕಬಿನಿ‌ ಜಲಾಶಯಕ್ಕೆ ಕೇವಲ 100 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, ದಿನೇ ದಿನೇ ಕಬಿನಿ‌ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ತಿಂಗಳಾಂತ್ಯಕ್ಕೆ ಕುಡಿಯುವ ನೀರಿಗೆ ತಾತ್ಸರ ಉಂಟಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಬಿರುಬಿಸಿಲಿನಿಂದ ಬಳಲಿದ್ದ ಜಿಲ್ಲೆಯ ಜನತೆಗೆ ವರುಣ ಕೃಪೆ ತೋರಿದ್ದಾರೆ. ಆದರೆ ಮೂರು‌ ದಿನಗಳಿಂದ ಮಳೆ ಬೀಳುತ್ತಿದೆ. ವೈನಾಡು ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆ ಜಲಾಶಯದ  ಕಬಿನಿ ಜಲಾಶಯದ ಒಳಹರಿವು ಹೆಚ್ಚುತ್ತಿಲ್ಲ.  ಕಬಿನಿ ಜಲಾಶಯದ‌ ನೀರಿನ ಮಟ್ಟ 84 ಅಡಿಗಳಿದೆ. ಜಲಾಶಯದ ಇಂದಿನ ನೀರಿನ ಮಟ್ಟ 59 ಅಡಿಗಳು.

ಇದೇ ಡ್ಯಾಂ ನಿಂದ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಿಗೆ ನೀರು ಪೂರೈಕೆಯಾಗುತ್ತದೆ. ಎರಡೂವರೆ ಕೋಟಿ ಜನರು ಕಪಿಲೆಯ ಒಡಲನ್ನೇ ಕುಡಿಯುವ ನೀರಿಗಾಗಿ ಆಶ್ರಯಿಸಿದ್ದಾರೆ.  ಪ್ರಾಣಿ- ಪಕ್ಷಿಗಳೂ ಕುಡಿಯುವ ನೀರಿಗೆ ಈ ಜಲಾಶಯವನ್ನೇ ಅವಲಂಬಿಸಿವೆ.

 ತಮಿಳುನಾಡಿಗೆ ನೀರು: ಗಂಭೀರ ಆರೋಪ

ಇನ್ನು ಜಲಾಶಯದಿಂದ ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿದ್ದು, ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಕುಡಿಯುವ ನೀರು, ವಿದ್ಯುತ್ ಯೋಜನೆಗೆ ನೀರು ಹರಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Key words: Low- inflow – Kabini Reservoir