ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಯುಡಬ್ಲ್ಯೂಜೆ ಅಭಿನಂದನೆ

ಬೆಂಗಳೂರು, ಜುಲೈ 07, 2023 (www.justkannada.in): ಪತ್ರಕರ್ತರ ಮಾಸಾಶನ ಹೆಚ್ಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆ ಸಲ್ಲಿಸಿದರು.

ಪತ್ರಕರ್ತರ ಮಾಸಾಶನವನ್ನು 10 ಸಾವಿರದಿಂದ 12 ಸಾವಿರಕ್ಕೆ, ಪತ್ರಕರ್ತ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ನೀಡಲಾಗುತ್ತಿದ್ದ ಪಿಂಚಣಿಯನ್ನು 3 ಸಾವಿರದಿಂದ 6 ಸಾವಿರಕ್ಕೆ ಹೆಚ್ಷಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೇರಿದಂತೆ ಇನ್ನುಳಿದ ಬೇಡಿಕೆಯನ್ನು ಈಡೇರಿಸುವಂತೆ ಗಮನ ಸೆಳೆದರು. ಮುಂದೆ ಪರಿಗಣಿಸುವುದಾಗಿ ಸಿಎಂ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಘಟಕದ ಸೋಮಶೇಖರ ಗಾಂಧಿ, ಸ್ವಾಮಿ, ರಾಯಚೂರಿನ ವೆಂಕಟಸಿಂಗ್ ಮತ್ತಿತರರು ಇದ್ದರು.

ಪ್ರಭಾಕರ್ ಗೆ ಅಭಿನಂದನೆ: ಕೆಯುಡಬ್ಲ್ಯೂಜೆ ಮನವಿ ಪರಿಗಣಿಸಿ, ಪತ್ರಕರ್ತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಬೇಡಿಕೆ ಈಡೇರಿಸಲು ಶ್ರಮಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರಿಗೂ ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.