ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪಕ್ಕೆ ಕುರುಬೂರು ಶಾಂತಕುಮಾರ್ ತೀವ್ರ ವಿರೋಧ….

ಮೈಸೂರು,ಅ,14,2019(www.justkannada.in):  ಮೈಸೂರು ಜಿಲ್ಲೆಯನ್ನ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಇಟ್ಟಿರುವ ಪ್ರಸ್ತಾಪಕ್ಕೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್  ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದ ಅನರ್ಹ ಶಾಸಕ ಹೆಚ್.ವಿಶ್ವನಾಥ್,  ಮೈಸೂರು ಜಿಲ್ಲೆ ವಿಭಜಿಸಿ 6 ತಾಲ್ಲೂಕುಗಳು ಸೇರಿ ಹುಣಸೂರು ಹೊಸ ಜಿಲ್ಲೆಯನ್ನಾಗಿ ಮಾಡಿ. ದೇವರಾಜ ಅರಸು ಹೆಸರಿಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದರು.

ಇದೀಗ ಹೆಚ್,ವಿಶ್ವನಾಥ್ ಪ್ರಸ್ತಾಪಕ್ಕೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್  ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಜಿಲ್ಲೆ ವಿಭಜನೆ ಮಾಡುವುದು. ಸಾಂಸ್ಕೃತಿಕ ನಗರಿಯನ್ನು ಒಡೆಯುವ ಕೆಲಸ ಮಾಡಬಾರದು. ಚಾಮರಾಜನಗರ ಹಿಂದೆ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲೇ ಇತ್ತು. ಮೈಸೂರು- ಚಾಮರಾಜನಗರ ವಿಭಜನೆಯಾದ ಬಳಿಕ ಚಾಮರಾಜನಗರ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ನಾವು  ಕಂಡಿದ್ದೇವೆ ಎಂದು ಹೆಚ್. ವಿಶ್ವನಾಥ್ ಗೆ ಟಾಂಗ್ ನೀಡಿದರು.

ವಿಶ್ವನಾಥ್ ಅವರು ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೊ ಅವರಿಗೆ ಗೊತ್ತಿದೆ. ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಜಿಲ್ಲೆಯ ಪ್ರಸ್ತಾಪ ಮಾಡುವುದು ಸರಿಯಲ್ಲ. ಜನಪ್ರತಿನಿಧಿಗಳು ಕೆಲಸ ಮಾಡಿದಾಗ ಮಾತ್ರ ಜಿಲ್ಲೆ ಅಭಿವೃದ್ಧಿ ಹಾಗೋದು. ಸರ್ಕಾರ ಈ ಪ್ರಸ್ತಾವನೆ ಕೈಬಿಡಬೇಕೆಂದು  ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

Key words: Kurubur Shanthakumar – opposed – proposal –hunusur- separate district