ಮೈಸೂರು, ಜುಲೈ 23, 2026 (www.justkannada.in): ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮೈಸೂರು ಜಿಲ್ಲೆಯ ವಿದ್ಯುತ್ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ), ಸ್ಥಳೀಯ ರೈತರು, ರೈತ ಸಂಘದ ಮುಖಂಡರು ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಭೂ ಮಾಲೀಕರಿಗೆ ಪರಿಹಾರದ ಡಿಡಿ ವಿತರಣೆ ಮಾಡಿ, ಸ್ಥಗಿತಗೊಂಡಿದ್ದ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ), ಮೈಸೂರು ಜಿಲ್ಲೆ ಮೂಲಕ ಮೈಸೂರು ತಾಲೂಕಿನ 220ಕೆವಿ ಕಡಕೊಳ-ವಾಜಮಂಗಲ ಮಾರ್ಗದ ವಿದ್ಯುತ್ ಸಂಪರ್ಕ ಮೂಲಸೌಕರ್ಯ ಕಾಮಗಾರಿಯನ್ನು 2011ರಲ್ಲಿ ಕೈಗೆತ್ತಿಕೊಂಡಿತ್ತು, ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿತ್ತು. ನಿಗಮದ ಸತತ ಪ್ರಯತ್ನ ಹಾಗೂ ಭೂ ಮಾಲೀಕರು ಹಾಗೂ ರೈತರ ಜೊತೆಗಿನ ಸೌಹಾರ್ದಯುತ ಸಂವಹನದ ಮೂಲಕ ಯೋಜನೆ ಪೂರ್ಣಗೊಳ್ಳಲು ಸಹಕಾರ ದೊರೆತಿದೆ. ಈ ಮೂಲಕ ನಿಗಮ ಕಾಮಗಾರಿಯನ್ನು ಆರಂಭಿಸಿದ್ದು, 40-50 ದಿನಗಳೊಳಗೆ ವಿದ್ಯುತ್ ಮಾರ್ಗದ ಲೈನ್ ಜೋಡಣೆ ಕಾರ್ಯ ಪೂರ್ಣಗೊಳ್ಳಲಿದೆ.
ನಿಗಮವು 2011 ರಲ್ಲಿ ಕಡಕೊಳ ಹಾಗೂ ವಾಜಮಂಗಲ ನಡುವೆ 220 ಕೆವಿ ವಿದ್ಯುತ್ ಸಂಪರ್ಕ ಯೋಜನೆಯನ್ನು ರೂಪಿಸತ್ತು, ಯೋಜನೆಯಂತೆ 83 ವಿದ್ಯುತ್ ಟವರ್ಗಳನ್ನು ನಿರ್ಮಿಸಲಾಗಿತ್ತು, ವಿದ್ಯುತ್ ಲೈನ್ ಜೋಡಿಸುವ ಕಾಮಗಾರಿ ಉಳಿಕೆಯಾಗಿತ್ತು. ಈ ನಡುವೆ ಭೂ ಮಾಲೀಕರು ಹಾಗೂ ರೈತರು ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದರು. ಇಂಧನ ಇಲಾಖೆ ಮಾನ್ಯ ಇಂಧನ ಸಚಿವರ ಕೆ.ಜೆ.ಜಾರ್ಜ್ ಅವರ ನಿರ್ದೇಶನದ ಮೇರೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಸೂಕ್ತ ಪರಿಹಾರವನ್ನು ಭೂ ಮಾಲೀಕರು ಹಾಗೂ ರೈತರರಿಗೆ ಒದಗಿಸಿಕೊಡುವ ಮೂಲಕ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಹಕಾರ ಕೋರಿದ್ದರು.
ನಿಗಮದ ಸೌಹಾರ್ದಯುತ ನಡೆಗೆ ಭೂಮಾಲೀಕರು ಹಾಗೂ ರೈತರು ಹರ್ಷವ್ಯಕ್ತಪಡಿಸಿದ್ದು, ನಿಗಮದ ಯೋಜನೆಗಳಿಗೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ವಿದ್ಯುತ್ ಯೋಜನೆಗಳು, ಕೃಷಿ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ದಿಗೆ ಪೂರಕವಾಗಿದೆ ಎಂದು ಸ್ಪಂದಿಸಿದ ನಿಗಮಕ್ಕೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕವಿಪ್ರನಿನಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪೂರ್ಣಚಂದ್ರ ತೇಜಸ್ವಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ್, ಸಹಾಯಕ ಇಂಜಿನಿಯರ್ ನವೀನ್, ಚಾವಿಸನಿನಿ ಅಧಿಕಾರಿಗಳು, ಸಿಬ್ಬಂದಿ, ಮೈಸೂರು ದಕ್ಷಿಣ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಸುನೀಲ್, ನಿಗಮದ ಮೈಸೂರು ಬೋರ್ಡ್ ವಕೀಲ ಜಗದೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಇಂಧನ ಇಲಾಖೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಿದ್ಯುತ್ ಮೂಲಸೌಕರ್ಯ ನಿರ್ಮಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ. ಈ ನಿಟ್ಟಿನಲ್ಲಿ ಭೂಮಾಲೀಕರು ಹಾಗೂ ರೈತರ ಸಹಕಾರ ಬಹಳ ಮುಖ್ಯವಾಗಲಿದೆ. ರೈತರಿಗೆ ತೊಂದರೆಯಾಗದಂತೆ ಪ್ರಸರಣ ನಿಗಮ ಪರಿಹಾರ ಮತ್ತು ಅಗತ್ಯ ನೆರವು ನೀಡಲು ಸದಾ ಸಿದ್ಧವಿದೆ ನಮ್ಮದೊಂದಿಗೆ ವಿಶ್ವಾಸವಿರಿಸಿ ಸಹಕರಿಸಿದರೆ ವಿದ್ಯುತ್ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸಲಾಗುವುದು ಎಂದಿದ್ದಾರೆ.
ಕವಿಪ್ರನಿನಿ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಮೈಸೂರು ಭಾಗದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರೈತರು ಮತ್ತು ರೈತ ಸಂಘಟನೆಗಳ ವಿಶ್ವಾಸದೊಂದಿಗೆ ನಾವು ವಿದ್ಯುತ್ ಮೂಲಸೌಕರ್ಯ ಉನ್ನತೀಕರಿಸುವ ಕೆಲಸ ಮಾಡುತ್ತಿದ್ದೇವೆ. ವಿದ್ಯುತ್ ಮೂಲಸೌಕರ್ಯ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸುವುದು ಮತ್ತು ಗುಣಮಟ್ಟದ ಸೇವೆ ಒದಗಿಸುವುದೇ ನಮ್ಮ ಧ್ಯೇಯವಾಗಿದೆ ಎಂದರು.
,ಅಧೀಕ್ಷಕ ಇಂಜಿನಿಯರ್ ರಮೇಶ್ ಮಾತನಾಡಿ ಭೂ ಮಾಲೀಕರು ಹಾಗೂ ರೈತರು ನಿಗಮದ ಜೊತೆ ಸಹಕಾರ ನೀಡಿದರೆ ಬರಲಿರುವ ದಿನಗಳಲ್ಲಿ ವೇಗವಾಗಿ ಕಾಮಗಾರಿ ಮುಗಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
Key words: KPTCL, Responds , Landowners , Farmers







