ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ

ಬೆಂಗಳೂರು,ಮಾರ್ಚ್,18,2026 (www.justkannada.in): ಕೆಪಿಎಸ್ ಸಿ ನಡೆಸಿದ ಕೆಎಎಸ್ ನಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು ಈ  ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಸುಧಾರಣೆಗೆ ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಕೆಪಿಸಿ ಅಕ್ರಮ ಸಂಬಂಧ  ವಿಧಾನಸಭೆಯಲ್ಲಿ  ಉತ್ತರ ನೀಡಿದ ಸಚಿವ  ಕೃಷ್ಣಭೈರೇಗೌಡ, ಕೆಪಿಎಸ್ ಸಿ ಯಲ್ಲಿ ಮಾತ್ರ ಸಮಸ್ಯೆಯಾಗುತ್ತಿದೆ.  ಕೆಇಎನಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ .ಕೆಇಎನಲ್ಲಿ 2000 ಪ್ರಶ್ನೆ ಸಿದ್ದಪಡಿಸಿ ಕನ್ನಡಕ್ಕೆ ಭಾಷಾಂತರ ಮಾಡಲಾಗುತ್ತದೆ.  ಪ್ರಶ್ನಾವಳಿ ಮಾಡುವಾಗ 20-30 ಪ್ರಶ್ನೆ ಆಯ್ಕೆ ಮಾಡುತ್ತಾರೆ. ಆಗಲೇ ಭಾಷಾಂತರ ಮಾಡಿರುವುದರಿಂದ ಲೋಪದೋಷ ಕಡಿಮೆ.  ಇದನ್ನೇ ಕೆಪಿಎಸ್ ಸಿಯಲ್ಲಿ ಅನುಷ್ಠಾನ ಮಾಡಲು ಚರ್ಚೆ ಆಗುತ್ತಿದೆ ಎಂದರು.

ಪ್ರತಿವರ್ಷ  ಇಂತಹ ತಿಂಗಳು ಇಂತಹ ದಿನ ಪರೀಕ್ಷೆ ನಡೆಸಬೇಕು ನಿಗದಿತ ದಿನದಲ್ಲಿ ಕಡ್ಡಾಯವಾಗಿ ಕೆಪಿಎಸ್ ಸಿ ಪರೀಕ್ಷೆ ನಡೆಸಬೇಕು. ಸಿ ಗ್ರೂಪ್ ಹಾಗೂ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯನ್ನ  ಯುಪಿಎಸ್ ಸಿ ಮಾದರಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ. 5 ವರ್ಷಕ್ಕೆ ಎಷ್ಟು ಹುದ್ದೆಗಳ ನೇಮಕಾತಿಯಾಗಲಿದೆ  ಈ ಬಗ್ಗೆ ಮುಂಗಡವಾಗಿ ಕ್ಯಾಲೆಂಡರ್ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಕೆಪಿಎಸ್ ಸಿಯಲ್ಲಿ ಇನ್ನೂ ಸುಧಾರಣೆ ಮಾಡಲು ನಿರ್ಧಾರ ಮಾಡಲಾಗಿದ್ದು ಸರ್ವಪಕ್ಷ ಸದಸ್ಯರನ್ನೊಳಗೊಂಡ ಸಮಿತಿ ರಚನೆಗೆ ಸಿಎಂ ಸೂಚನೆ ನೀಡಿದ್ದಾರೆ.  ಮುಂದಿನ  ಅಧಿವೇಶನದೊಳಗೆ ಸಮಿತಿ ವರದಿ ಕೊಟ್ಟರೆ ಅದನ್ನು ಅನುಷ್ಠಾನ ಮಾಡಲು ಸರ್ಕಾರ ಸಿದ್ದ ಎಂದು ತಿಳಿಸಿದರು.

Key words:  KPSC, Illegal recruitment, Government, Assembly