ನಿಮ್ಮಿಂದ ಅನವಶ್ಯಕ ತಪ್ಪು ನಡೆದಿದೆ, ನೀವೇ ಸರಿಪಡಿಸಿ- ಸಂಸದೆ ಸುಮಲತಾ ಅಂಬರೀಶ್.

ಮಂಡ್ಯ,ಜನವರಿ,30,2024(www.justkannada.in):  ಮಂಡ್ಯ ತಾಲ್ಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಹನುಮ ಧ್ವಜ ಹಾರಿಸಿದ್ದು ಒಂದು ಸಾರ್ವಜನಿಕ ಸ್ಥಳದಲ್ಲೇ ಹೊರತು ಬೇರೆ ಧರ್ಮದ ಪ್ರಾರ್ಥನಾ ಮಂದಿರದ ಮೇಲಲ್ಲ. ಹಾಗಾಗಿ, ಗ್ರಾಮದ ಜನರೊಂದಿಗೆ ಮಾತಾಡಿ ವಿಷಯವನ್ನು ಸುಲಭವಾಗಿ, ಶಾಂತಿಯುತವಾಗಿ ಬಗೆಹರಿಸಬಹುದಿತ್ತು. ಜನರನ್ನ ಸಮಾಧಾನ ಮಾಡಿದ್ದರೇ ಇಷ್ಟಲ್ಲಾ ಮಾಡುವ ಅವಶ್ಯಕತೆ ಇರಲಿಲ್ಲ  ಬಲವಂತವಾಗಿ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ರಾಮಮಂದಿರ ವಿಚಾರದಲ್ಲಿ ಅನೇಕ ಜನರು ಭಾವುಕರಾದ್ರು. ವಿರೋಧವನ್ನ  ಕೇವಲ ಪಕ್ಷದ ಕಾರ್ಯಕರ್ತರು ಮಾಡಿಲ್ಲ.  ಮಂಡ್ಯದ ಜನ ಕೂಡ ಧ್ವಜ ತೆರವನ್ನ ವಿರೋಧಿಸಿದ್ದಾರೆ.  ತುಂಬಾ ತಪ್ಪಾಗಿದೆ. ಕಾರಣ ಯಾರು ಅಂತ ನಿಮಗೆ ಗೊತ್ತಿದೆ.   ನಿಮ್ಮಿಂದ ಅನವಶ್ಯಕ ತಪ್ಪು ನಡೆದಿದೆ ನೀವೇ ಸರಿಪಡಿಸಿ ಎಂದರು.

ಸರ್ಕಾರ ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸುತ್ತಿರುವ ಬಗ್ಗೆ ಹೇಳಿಕೊಳ್ಳುತ್ತಿರುವುದಾದರೆ, ಯಾರ ಭಾವನೆಗಗಳಿಗೂ ಧಕ್ಕೆ ಉಂಟು ಮಾಡದ ಹನುಮ ಧ್ವಜ ಮಾತ್ರ ಅದರ ಕಣ್ಣಿಗೆ ಬಿತ್ತೇ? ಮಂಡ್ಯ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಅನೇಕ ಕೆರೆಗಳ ಒತ್ತುವರಿಯಾಗಿದೆ, ಇಂಥ ಪ್ರಕರಣಗಳಲ್ಲಿ ಕಾನೂನು ಯಾಕೆ ಸುಮ್ಮನಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.

Key words: keregodu-Hanuma flag-unnecessary -mistake- MP -Sumalatha Ambarish