ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆಯಿಂದ ವಕೀಲರ ಆತ್ಮಸ್ಥೈರ್ಯ  ಹೆಚ್ಚಿಸಿದೆ- ಎಚ್. ಎ. ವೆಂಕಟೇಶ್.

ಮೈಸೂರು,ಡಿಸೆಂಬರ್,16,2023(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-2023 ಜಾರಿ ಮಾಡಲು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿರುವುದು ವಕೀಲರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ. ನ್ಯಾಯವಾದಿಗಳ ಬಹಳ ದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ವಕೀಲ ಎಚ್. ಎ. ವೆಂಕಟೇಶ್ ತಿಳಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಸಂತಸ ವ್ಯಕ್ತಪಡಿಸಿರುವ ಎಚ್. ಎ. ವೆಂಕಟೇಶ್ ಅವರು, ವಕೀಲ ವೃತ್ತಿ ಇತರರ ವೃತ್ತಿಗಿಂತ ಭಿನ್ನವಾದದ್ದು. ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವಂಥದ್ದಲ್ಲ. ಕಕ್ಷಿದಾರರಿಗೆ ನ್ಯಾಯ ಒದಗಿಸಲು ವಿವಿಧ ಸ್ಥಳಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿರುತ್ತದೆ. ಹಾಗೂ ಯಾವುದೇ ರಕ್ಷಣೆ ಇಲ್ಲದೆ ಕಾರ್ಯನಿರ್ವಹಿಸಬೇಕಾಗುತ್ತದೆ. ಬಹಳ ಪರಿಶ್ರಮದಿಂದ ನ್ಯಾಯ ದೊರಕಿಸಿಕೊಡಲು  ಪ್ರಯತ್ನಿಸಿದಾಗ ವಕೀಲರೇ ಆಪತ್ತಿಗೆ ಸಿಕ್ಕಿಹಾಕಿಕೊಳ್ಳಬೇಕಾದ ಸಂದರ್ಭವೂ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ನ್ಯಾಯ ಒದಗಿಸಿ ಕೊಡುವುದು ಸಾಮಾನ್ಯ ವಿಚಾರವಲ್ಲ, ಇದೊಂದು ತ್ಯಾಗದ ಕೆಲಸ. ವಕೀಲರಿಗೆ ಆರ್ಥಿಕವಾಗಿ ಕೂಡ ಯಾವುದೇ ಭದ್ರತೆ ಇರುವುದಿಲ್ಲ.

ಅನ್ಯಾಯದ ವಿರುದ್ಧ ಹೋರಾಡಲು, ನಿರ್ಭೀತಿಯಿಂದ ಕೆಲಸ ಮಾಡಲು ನೂತನ ಮಸೂದೆ ಸಹಕಾರಿಯಾಗಲಿದೆ. ನ್ಯಾಯವಾದಿಗಳ ಮೇಲೆ ಸುಳ್ಳು ಮುಖದೊಮ್ಮೆ ದಾಖಲಿಸುವುದು, ಹಲ್ಲೆ ಮಾಡುವುದು, ಗೂಂಡಾಗಿರಿ ನಡೆಸುವವರಿಗೆ ಕಡಿವಾಣ ಹಾಕಿದಂತಾಗಿದೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.

ಸ್ವತಹ ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಕಾನೂನು ಮಂತ್ರಿ ಎಚ್. ಕೆ. ಪಾಟೀಲ್, ಗೃಹ ಮಂತ್ರಿ ಡಾ. ಜಿ ಪರಮೇಶ್ವರ ರವರ ಆಸಕ್ತಿಯಿಂದ ಹೊಸ ಕಾಯ್ದೆ ಜಾರಿಯಾಗಿರುವುದು ಸಂತಸ ತಂದಿದೆ ಎಂದು ಹೆಚ್.ಎ ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

Key words: Karnataka -Prohibition – Violence -Lawyers –Act- self-confidence -H. A. Venkatesh.