ದೇಶದ ಗ್ರೀನ್‌ ಎಕಾನಮಿಗೆ ಬೆಂಗಳೂರು ಕೊಡುಗೆ ಅಪಾರ : ಕೇಂದ್ರ ಸಚಿವ ನಿತಿನ್ ಗಡ್ಕರಿ

 

ಬೆಂಗಳೂರು ನವೆಂಬರ್‌ 12: ಇವಿ ಹಾಗೂ ಗ್ರೀನ್‌ ಹೈಡ್ರೋಜನ್‌ ನಂತಹ ಹಲವಾರು ಕ್ರಾಂತಿಕಾರಿ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ನಗರ ದೇಶದ ಗ್ರೀನ್‌ ಎಕಾನಮಿಗೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ನಗರದ ಆರ್‌ ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ದಿವಂಗತ ಅನಂತಕುಮಾರ್‌ ಅವರ 3 ನೇ ಪುಣ್ಯತಿಥಿಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಅನಂತಕುಮಾರ್‌ ಸ್ಮಾರಕ ಉಪನ್ಯಾಸದಲ್ಲಿ ವರ್ಚುಯಲ್‌ ಆಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಗ್ರೀನ್‌ ಎಕಾನಮಿಯಲ್ಲಿ ರಾಜ್ಯ ಬೆಂಗಳೂರು ನಗರದ ಕೊಡುಗೆ ಅಪಾರ: ದೇಶದಲ್ಲಿ ಗ್ರೀನ್‌ ಎಕಾನಮಿ ಬಹಳ ವೇಗವಾಗಿ ಅಭಿವೃದ್ದಿಗೊಳ್ಳುತ್ತಿದೆ. ಇವಿ ಹಾಗೂ ಗ್ರೀನ್‌ ಹೈಡ್ರೋಜನ್‌ ನಂತಹ ಕ್ಷೇತ್ರಗಳಲ್ಲಿ ಬೆಂಗಳೂರು ನಗರದ ಸ್ಟಾರ್ಟ್‌ ಅಪ್‌ ಗಳು ಪ್ರಮುಖ ಸಂಶೋಧನೆಯನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಇಥೆನಾಲ್‌ ಉತ್ಪಾದನೆ ಹೆಚ್ಚಾಗಿದೆ. ಫ್ಲೇಕ್ಸ್‌ ಇಂಜಿನ್‌ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ದಿಯಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಲ್ಲಿ ಬೆಂಗಳೂರು ನಗರದ ಕೊಡುಗೆ ಬಹಳಷ್ಟಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಹಸಿರು ಆರ್ಥಿಕತೆ ಅಭಿವೃದ್ದಿಯಾಗಲಿದ್ದು, ಅದರಲ್ಲಿ ಬೆಂಗಳೂರು ನಗರದ ಸ್ಟಾರ್ಟ್‌ ಅಪ್‌ಗಳು ನೇತೃತ್ವ ವಹಿಸಲಿದೆ ಎಂದರು.

೫ ವರ್ಷಗಳಲ್ಲಿ ಆಟೊಮೊಬೈಲ್‌ ಕ್ಷೇತ್ರದಲ್ಲಿ ನಂ೧ ಸ್ಥಾನ ಹೊಂದುವ ಗುರಿ:

ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳನ್ನು ನೋಡಿದಲ್ಲಿ ಮುಂದಿನ 5 ವರ್ಷಗಳಲ್ಲಿ ಭಾರತ ದೇಶ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಈ ಕ್ಷೇತ್ರದಲ್ಲೂ ಬೆಂಗಳೂರು ನಗರ ಪ್ರಮುಖ ಪಾತ್ರವಹಿಸಲಿದೆ ಎಂದರು.
ಒಳನಾಡು ಜಲಸಾರಿಗೆಗೆ ಹೆಚ್ಚಿನ ಮಹತ್ವ: ದೇಶದಲ್ಲಿ ಸಾಗಾಣಿಕೆ ವೆಚ್ಚ ಹೆಚ್ಚಿದೆ. ಇದನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಂತರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ಒಳನಾಡು ಜಲಸಾರಿಗೆಗೆ ಮಾರ್ಗಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ರಿಂಗ್‌ ರಸ್ತೆ:

ಅನಂತಕುಮಾರ್‌ ಅವರ ಬಹುದಿನಗಳ ಕನಸಾಗಿದ್ದ ಬೆಂಗಳೂರು ರಿಂಗ್‌ ರಸ್ತೆಯ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಯನ್ನು ನಡೆಸಲಾಗಿದೆ. ಚುನಾವಣೆಯ ನೀತಿ ಸಂಹಿತೆಯ ನಂತರ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು ರಿಂಗ್‌ ರಸ್ತೆಯ ಕಾಮಗಾರಿ ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪಿ ವಿ ಕೃಷ್ಣ ಭಟ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಗಂಗಾಧರ, ಪ್ರೊ ಹೆಚ್ ಎಸ್ ನಾಗರಾಜ್, ಪುತ್ರಿಯರಾದ ಐಶ್ವರ್ಯ ಮತ್ತು ವಿಜೇತ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಹೆಚ್‌ ಎನ್ ನಂದಕುಮಾರ್‌ ಮತ್ತು ಪ್ರದೀಪ್‌ ಓಕ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

key words : Karnataka-Bangalore-ananth.kumar-nithin-gadkari-bjp-green-economy-Bangalore