ಮೈಸೂರು,ಜುಲೈ,6,2026 (www.justkannada.in): ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಒಂದೇ ದಿನಕ್ಕೆ ಅಂದರೆ 24 ಗಂಟೆಯಲ್ಲೇ ಕಬಿನಿ ಜಲಾಶಯಕ್ಕೆ ಆರು ಅಡಿ ನೀರು ಹರಿದು ಬಂದಿದ್ದು, 300 ಕ್ಯೂಸೆಕ್ ಇದ್ದ ಒಳಹರಿವು ಆರು ಸಾವಿರಕ್ಕೆ ಹೆಚ್ಚಳವಾಗಿದೆ. ನಿನ್ನೆ 53 ಅಡಿಗೆ ಕುಸಿದಿದ್ದ ಕಬಿನಿ ಡ್ಯಾಂ ನೀರಿನ ಮಟ್ಟ ಇದೀಗ ಇಂದು 59 ಅಡಿಗೆ ಏರಿಕೆ ಕಂಡಿದೆ. ಕಬಿನಿ ಜಲಾಶಯದ ಒಟ್ಟು ಎತ್ತರ 84 ಅಡಿಗಳಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಚನ್ನಪಟ್ಟಣ, ರಾಮನಗರ, ಮಂಡ್ಯ, ನಂಜನಗೂಡು, ತಿ.ನರಸೀಪುರ, ಚಾಮರಾಜನಗರ ಸೇರಿ ಹಲವು ಪಟ್ಟಣಗಳಿಗೆ ಕಬಿನಿ ಜಲಾಶಯ ನೀರುಣಿಸುತ್ತಿದ್ದು, ಇದು ರಾಜ್ಯದ ಎರಡು ಕೋಟಿ ಜನರ ಪಾಲಿನ ಕುಡಿಯುವ ನೀರಿನ ಆಶ್ರಯದ ಡ್ಯಾಂ ಆಗಿದೆ.
ಕಾಡು ಪ್ರಾಣಿಗಳ ಕುಡಿಯುವ ನೀರಿಗೂ ಈ ಜಲಾಶಯ ಆಶ್ರಯವಾಗಿದ್ದು ತಮಿಳುನಾಡಿಗೆ ಈ ಡ್ಯಾಂನಿಂದ ಅತಿಹೆಚ್ಚು ನೀರು ಬಿಡಲಾಗುತ್ತದೆ.
Key words: Kabini Dam, inflow, increases, 6 feet, rise , single day







