Saturday, August 22, 2026

BDA Apartments

Home Front Page SIR ಬಗ್ಗೆ ಬಿಜೆಪಿ ದ್ವಂದ್ವಕ್ಕೆ ಕಾರಣವೇನು?  ಕೆ.ವಿ.ಮಲ್ಲೇಶ್ ಟೀಕೆ

SIR ಬಗ್ಗೆ ಬಿಜೆಪಿ ದ್ವಂದ್ವಕ್ಕೆ ಕಾರಣವೇನು?  ಕೆ.ವಿ.ಮಲ್ಲೇಶ್ ಟೀಕೆ

ಮೈಸೂರು, ಜುಲೈ,7,2026 (www.justkannada.in):  ದೇಶದ ತುಂಬೆಲ್ಲ ಎಸ್ ಐಆರ್ ಪ್ರಕ್ರಿಯೆ ಸಮರ್ಥಿಸಿಕೊಂಡಿದ್ದ ಬಿಜೆಪಿ ನಾಯಕರು, ಕರ್ನಾಟಕದಲ್ಲಿ ಮಾತ್ರ ವಿರೋಧ ಮಾಡುತ್ತಿರುವುದು ಅಚ್ಚರಿ ಹಾಗೂ ಹಾಸ್ಯಾಸ್ಪದ ಬೆಳವಣಿಗೆಯಾಗಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ, ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ.ಮಲ್ಲೇಶ್ ವ್ಯಂಗ್ಯವಾಡಿದ್ದಾರೆ.

ಪತ್ರಿಕಾ ಹೇಳಿಕೆ ಮೂಲಕ ಈ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ(ಎಸ್ಐಆರ್) ಪ್ರಾರಂಭಿಸಿದಾಗ ರಾಜಕೀಯ ಪಕ್ಷಗಳು ಲೋಪದೋಷಗಳ ಬಗ್ಗೆ ಪ್ರಶ್ನೆ ಎತ್ತಿದ್ದವು. ಆಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ನಾಯಕರೆಲ್ಲರೂ ಎಸ್ ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದರು. ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ, ಛತ್ತೀಸ್ ಘಢ, ಗೋವಾ ರಾಜ್ಯಗಳಲ್ಲಿ ಎಸ್ ಐಆರ್ ನಡೆಯುವಾಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯದಲ್ಲೂ ಎಸ್ ಐಆರ್ ಮುಗಿದಿದ್ದು, ಎಲ್ಲ ಕಡೆಯೂ ಬಿಜೆಪಿ ನಾಯಕರು ಎಸ್ಐಆರ್ ʼದೇಶೋದ್ಧಾರʼದ ಮಾರ್ಗ ಎಂದೇ ಬಣ್ಣಿಸಿದ್ದರು.

ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ನಾಯಕರೇ ಮುಂಚೂಣಿಯಲ್ಲಿ ನಿಂತು ಎಸ್ ಐಆರ್ ವಿರೋಧ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ನಿಯೋಗ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದಾರೆ. ಮೈಸೂರಿನಲ್ಲೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ದೇಶದ ತುಂಬೆಲ್ಲ ಎಸ್ ಐಆರ್ ಪರವಾಗಿ ಇದ್ದ ಬಿಜೆಪಿ ನಾಯಕರು ರಾಜ್ಯದಲ್ಲಿ ಮಾತ್ರ ವಿರೋಧ ಮಾಡುತ್ತಿರುವುದು ಯಾಕೆ ? ಬಿಜೆಪಿ- ಜೆಡಿಎಸ್ ನಾಯಕರಿಗೆ ಏನಾಗಿದೆ ? ನಿಮ್ಮ ಅನುಮಾನಗಳಿಗೆ ಕಾರಣವೇನು ? ಕಾಂಗ್ರೆಸ್ ಪಕ್ಷ ಅಥವಾ ರಾಜ್ಯ ಸರ್ಕಾರದ ಬಗ್ಗೆ ನೀವು ಹೊಂದಿರುವ ಅಸಹನೆಗೆ ಕಾರಣವಿದೆಯೇ ಎಂಬ ಎಲ್ಲ ಪ್ರಶ್ನೆಗಳಿಗೂ ಬಿಜೆಪಿ ನಾಯಕರು ಉತ್ತರಿಸಬೇಕು. ಇಲ್ಲವಾದರೆ ಜನರೇ ನಿಮ್ಮ ದ್ವಂದ್ವ ನಿಲುವಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.

Key words: BJP, duality, SIR,  K.V. Mallesh, Mysore