ಮೈಸೂರು,ಅಕ್ಟೋಬರ್,16,2025 (www.justkannada.in): ಆರ್ ಎಸ್ ಎಸ್. ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಹುನ್ನಾರ ನಡೆಸಲು ಮುಂದಾಗಿರುವುದು ಸರಿಯಲ್ಲ. ನಮ್ಮ ಮನೆಗಳ ಮೇಲೆ ಭಗವಧ್ವಜ ಹಾರಿಸಿ, ಮನೆಗಳಲ್ಲಿ ಶಾಖೆ ಮಾಡುತ್ತೇವೆ ಎಂದು ಯುವಭಾರತ್ ಸಂಘಟನೆಯ ಸದಸ್ಯ ಜೋಗಿ ಮಂಜು ಎಚ್ಚರಿಕೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನೂರು ವರ್ಷಗಳ ಇತಿಹಾಸವಿರುವ ಆರ್ ಎಸ್ ಎಸ್. ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಸ್ವಾತಂತ್ರ್ಯ ಹಾಗೂ ಸಾಮಾಜಿಕ ಕಾರ್ಯಗಳ ಹೋರಾಟದಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ.
ರಾಷ್ಟ್ರೀಯತೆ ಹಾಗೂ ಹಿಂದೂ ಧರ್ಮವನ್ನು ರಕ್ಷಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಪಾಲಿಸಿಕೊಂಡು ಬರುತ್ತಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಆರ್. ಎಸ್. ಎಸ್. ಚಟುವಟಿಕೆಗಳನ್ನು ನಿರ್ಬಂಧಿಸಲು ಕಾಂಗ್ರೆಸ್ ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ತಮಿಳುನಾಡು ಮಾದರಿಯಲ್ಲಿ ಸಂಘದ ಮೇಲೆ ನಿರ್ಬಂಧ ಹೇರುವ ಪ್ರಯತ್ನ ಮಾಡುತ್ತಿದೆ. ಆದರೆ ತಮಿಳುನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸ್ವಂತ ಸ್ಥಳಗಳಲ್ಲಿ ಶಾಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಇದೆ. ಇದರ ಅರಿವಿಲ್ಲ ಎಂದು ಕಾಣುತ್ತದೆ. ಇಂತಹ ಕಿಡಿಗೇಡಿ ಕೃತ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿದ್ದರೆ ರಾಜ್ಯದ ಎಲ್ಲಾ ಸ್ವಯಂ ಸೇವಕರ ಮನೆಯ ಮೇಲೆ ಭಗವಧ್ವಜ ಹಾರಿಸಿ ನಮ್ಮ ಮನೆಗಳಲ್ಲಿ ಶಾಖೆ ಮಾಡಲಾಗುವುದು ಎಂದು ಎಚ್ಚರಿಸಿದರು..
ನಿರ್ಬಂಧದ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ದುರಾಡಳಿತವನ್ನು ಮರೆಮಾಚುತ್ತಿದೆ ಇಂತಹ ಭ್ರಷ್ಟ ಹಾಗೂ ಭಂಡ ಸರ್ಕಾರದಲ್ಲಿ ಜನಸಾಮಾನ್ಯರ ಕಷ್ಟ ಹೇಳತೀರದಾಗಿದೆ ಎಂದು ಜೋಗಿ ಮಂಜು ವಾಗ್ದಾಳಿ ನಡೆಸಿದ್ದಾರೆ.
Key words: RSS, hoist, Bhagavadgwa, Mysore, Jogi Manju