Monday, August 17, 2026

BDA Apartments

Home Front Page ಈಶ ಗ್ರಾಮೋತ್ಸವ 2026: 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರ ಸಮಾಗಮದೊಂದಿಗೆ ಪಂದ್ಯಗಳ ಸಮಾಪಣೆ

ಈಶ ಗ್ರಾಮೋತ್ಸವ 2026: 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರ ಸಮಾಗಮದೊಂದಿಗೆ ಪಂದ್ಯಗಳ ಸಮಾಪಣೆ

ಬೆಂಗಳೂರು, ಆಗಸ್ಟ್, 16, 2026 (www.justkannada.in):  ಈಶ ಔಟ್‌ರೀಚ್ ಆಯೋಜಿಸಿದ್ದ  18ನೇ ಆವೃತ್ತಿಯ ಈಶ ಗ್ರಾಮೋತ್ಸವ 2026ರ ಕರ್ನಾಟಕ ವಿಭಾಗೀಯ ಪಂದ್ಯಗಳು ಮೈಸೂರಿನ ಜಗದೀಶ್ ಪ್ರಸಾದ್ ಆಟದ ಮೈದಾನ ಜಯಲಕ್ಷ್ಮಿ ಪುರಂ ನಲ್ಲಿ ನಡೆದಿದ್ದು, ಈ ಭಾಗದ 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಭಾಗವಹಿಸಿದ್ದರು.

ಈ ವಿಭಾಗೀಯ ಪಂದ್ಯಗಳಲ್ಲಿ 20 ಪುರುಷರ ವಾಲಿಬಾಲ್ ತಂಡಗಳು ಮತ್ತು 12 ಮಹಿಳೆಯರ ಥ್ರೋಬಾಲ್ ತಂಡಗಳು ಪಾಲ್ಗೊಂಡಿದ್ದವು. ರಾಷ್ಟ್ರೀಯ ಹಂತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಹಂಬಲವಿರುವ ತಂಡಗಳಿಗೆ ಈ ಪಂದ್ಯಾವಳಿಯು ಪ್ರಮುಖ ಅರ್ಹತಾ ಸುತ್ತಾಗಿತ್ತು.

ಶಾಸಕ ಹರೀಶ್ ಗೌಡ, ‘ಖೇಲೋ ಇಂಡಿಯಾ’ದ ಕಾರ್ಯನಿರ್ವಾಹಕ ನಿರ್ದೇಶಕಿ ಕುಮಾರಿ ಅಮರ್ ಜ್ಯೋತಿ, ಪ್ರಶಸ್ತಿ ವಿಜೇತ ಜಾನಪದ ಗಾಯಕ ಅಮ್ಮಾ ರಾಮಚಂದ್ರ ಮತ್ತು ಟಿಬೆಟಿಯನ್ ಬೌದ್ಧ ಭಿಕ್ಷು ನವಾಂಗ್ ಲಾಮಾ ಅವರಂತಹ ಗಣ್ಯರ ಸಮ್ಮುಖದಲ್ಲಿ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು. ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್‌ಮಾಸ್ಟರ್ ತೇಜ್‌ ಕುಮಾರ್ ಎಂ.ಎಸ್. ಅವರು ಭಾಗವಹಿಸಿದ್ದರು.

ತೀವ್ರ ಪೈಪೋಟಿಯಿಂದ ಕೂಡಿದ ಸರಣಿ ಪಂದ್ಯಗಳ ನಂತರ ಪುರುಷರ ವಾಲಿಬಾಲ್ ಪಂದ್ಯಾವಳಿಯು ಮುಕ್ತಾಯಗೊಂಡಿದ್ದು,  ಚಾಮರಾಜನಗರದ ರಾಮಾಪುರದ ಬುದ್ಧ ಸೂಪರ್ ಟೀಂ ತಂಡ  ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಂಜನಗೂಡಿನ ಕಡಕೋಳದ ಚಾಮುಂಡಿ ಬಾಯ್ಸ್ ತಂಡ ಅದ್ಭುತ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಚಿಕ್ಕಬಳ್ಳಾಪುರದ ಮಾಸ್ತೇನಹಳ್ಳಿಯ ಅಪ್ಪು ಬಾಯ್ಸ್ ತಂಡ  ತೃತೀಯ ಸ್ಥಾನವನ್ನು ಕಾಯ್ದುಕೊಂಡರೆ,  ಕೋಲಾರದ ಮಾರ್ಜೇನಹಳ್ಳಿಯ ಎಂ.ಆರ್.ಜೆ ಬ್ರೋಧೆರ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ, ನಂಜನಗೂಡಿನ ಹೆಡತಲೆಯ ಚಾಮುಂಡಿ ಗರ್ಲ್ಸ್ ತಂಡ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚಿಕ್ಕಬಳ್ಳಾಪುರದ ಬಲಿಗನಹಳ್ಳಿಯ ಸಿ.ಎಸ್.ಎ ತಂಡ  ದ್ವಿತೀಯ ಸ್ಥಾನ ಪಡೆಯಿತು, ಹಾಗೂ ಶಿವೋಮೊಗ್ಗದ ಗುಡ್ಡೆಕೊಪ್ಪದ ಕೊಡಚಾದ್ರಿ ತಂಡ ಮತ್ತು ಬೆಟ್ಟದಪುರದ ಚಿಕ್ಕನೇರಳೆಯ ಜೈ ಶ್ರೀ ರಾಮ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡವು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಗೌಡ , “ಸದ್ಗುರು ಮತ್ತು ಈಶಾ ಫೌಂಡೇಶನ್‌ನ ಕಾರ್ಯ ಹಾಗೂ ದೂರದೃಷ್ಟಿಯನ್ನು ಕಂಡು ನನಗೆ ಅತ್ಯಂತ ಸಂತೋಷವಾಗಿದೆ. ಸ್ವತಃ ಒಬ್ಬ ಕ್ರೀಡಾಪಟುವಾಗಿರುವುದರಿಂದ, ದೈನಂದಿನ ಜೀವನದಲ್ಲಿ ಹಾಗೂ ಸಮಾಜದ ಒಟ್ಟಾರೆ ಕ್ಷೇಮಾಭಿವೃದ್ಧಿಯಲ್ಲಿ ಇದರ ಮಹತ್ವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇಲ್ಲಿ ನಡೆದ ಕ್ರೀಡಾಕೂಟದ ನಂತರ ಒಬ್ಬ ಮಹಿಳೆಯ ನರಗಳ ಉಬ್ಬುವಿಕೆ ಸಮಸ್ಯೆ ಗುಣವಾಗಿದೆ ಎಂಬ ವಿಷಯ ತಿಳಿದು ನನಗೆ ಹೆಮ್ಮೆ ಎನಿಸುತ್ತಿದೆ. ನಾನು ಸದ್ಗುರುಗಳ ವೀಡಿಯೊಗಳನ್ನು ವೀಕ್ಷಿಸುತ್ತೇನೆ; ಅವು ನನಗೆ ಉಪಯುಕ್ತವೆನಿಸಿವೆ ಮತ್ತು ಅವರಿಂದ ನಾನು ಅಪಾರ ಸ್ಫೂರ್ತಿಯನ್ನು ಪಡೆದಿದ್ದೇನೆ.” ಎಂದು ಹೇಳಿದರು.

Key words: Isha Gramotsava 2026: Matches conclude with a gathering of over 300 rural players