ಆ.1ರೊಳಗೆ ಒಳಮೀಸಲಾತಿ ಜಾರಿಯಾಗದಿದ್ರೆ ಉಗ್ರ ಹೋರಾಟ: ಸರ್ಕಾರಕ್ಕೆ ಎಚ್ಚರಿಕೆ

ಮೈಸೂರು,ಜುಲೈ,25,2025 (www.justkannada.in): ಆಗಸ್ಟ್ 1ರೊಳಗೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ಸಮಾಜ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಹಾಗು ಹಿರಿಯ ವಕೀಲ ಅರುಣ್ ಕುಮಾರ್ ಮತ್ತು ಒಳಮೀಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ಸಮಾಜ ನ್ಯಾಯಪರ ವಕೀಲರ ವೇದಿಕೆ ಹಾಗೂ ಒಳಮೀಸಲಾತಿ ಹೋರಾಟ ಸಮಿತಿಯಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಹಿರಿಯ ವಕೀಲ ಅರುಣ್ ಕುಮಾರ್, ರಾಜ್ಯ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜದ ನಂಬರ್ ಒನ್ ವೈರಿಯಾಗಿದೆ. ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿ ಮುಂಬರುವ ಆಗಸ್ಟ್ 1ಕ್ಕೆ ಒಂದು ವರ್ಷವಾಗಲಿದೆ. ಆದರೂ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿಲ್ಲ. ಒಳಮೀಸಲಾತಿ ಜಾರಿ ಮಾಡದೇ ಕೇವಲ ಓಟ್ ಬ್ಯಾಂಕ್ ಗಾಗಿ ಪರಿಶಿಷ್ಟ ಸಮುದಾಯದ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಜಸ್ಟೀಸ್ ನಾಗಮೋಹನದಾಸ್ ಆಯೋಗ ಹಾಗೂ ರಾಜ್ಯ ಸರ್ಕಾರ ಮಾದಿಗ ಸಮುದಾಯದ ವಿರೋಧಿಗಳೆಂಬುದು ಸ್ಪಷ್ಟವಾಗಿದೆ. ಮಾದಿಗ ಸಮುದಾಯ ಪರಿಶಿಷ್ಟ ಸಮುದಾಯದಲ್ಲೇ ಅತಿ ಹೆಚ್ಚು ತುಳಿತಕ್ಕೆ ಒಳಗಾದ ಸಮುದಾಯವಾಗಿದೆ. ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ಮಾಡಲು ನೇಮಿಸಿರುವ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಪದೇ ಪದೇ ದಿನಾಂಕವನ್ನು ವಿಸ್ತರಿಸುತ್ತಿದೆ. ನಾಗಮೋಹನ್ ದಾಸ್ ಸಮಿತಿ ಆಗಸ್ಟ್ 1ರೊಳಗೆ ವರದಿ ನೀಡದಿದ್ದರೇ ಉಗ್ರ ಹೋರಾಟ ನಡೆಸುತ್ತೇವೆ ಎಂದು ವಾರ್ನಿಂಗ್ ನೀಡಿದರು.

ಒಳಮೀಸಲಾತಿ ಜಾರಿಗೆ ಹಿಂದೇಟು ಹಾಕಿದರೇ ಹೋರಾಟ ಅನಿವಾರ್ಯ- ಭಾಸ್ಕರ್ ಪ್ರಸಾದ್

ಇದೇ ವೇಳೆ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್, ಒಳಮೀಸಲಾತಿ ಜಾರಿಗೆ ತ್ವರಿತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುವುದನ್ನು ಮುಂದುವರಿಸಿದರೆ ಹೋರಾಟ ಅನಿವಾರ್ಯ. ಮಾದಿಗ ಸಮುದಾಯದ ಹೋರಾಟದ ಬಗ್ಗೆ ಮಾತನಾಡಲು ಸಚಿವ ಕೆ. ಹೆಚ್ ಮುನಿಯಪ್ಪಗೆ ಯಾವುದೇ ನೈತಿಕತೆ ಇಲ್ಲ. ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬರುವ ಆಗಸ್ಟ್ 1ರಿಂದ ರಾಜ್ಯದಾದ್ಯಂತ ಪಕ್ಷಾತೀತವಾಗಿ ಹೋರಾಟ ಆರಂಭಿಸುತ್ತೇವೆ. ಹಾಗಾಗಿ ಜುಲೈ 31ರೊಳಗೆ ನಾಗಮೋಹನ್ ದಾಸ್ ಸಮಿತಿ ನೀಡುವ ವರದಿ ಸ್ವೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಆಗಸ್ಟ್ 1 ರಂದು ರಾಜ್ಯ ಸರ್ಕಾರದ ಶವಯಾತ್ರೆ ಮಾಡುತ್ತೇವೆ. ತಲೆ ಬೋಳಿಸಿಕೊಂಡು ತಲೆಕೂದಲನ್ನು ಸರ್ಕಾರಕ್ಕೆ ರವಾನಿಸುತ್ತೇವೆ. ಏಕೆಂದರೆ ಈ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂದು ಹರಿಹಾಯ್ದರು.vtu

Key words:  protests, internal reservation, Warning, government