ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: ಮತ್ತೆ ಕೋಟ್ಯಾಧಿಪತಿಯಾದ ಮಾದಪ್ಪ.

ಹನೂರು,ಸೆಪ್ಟಂಬರ್,2,2023(www.justkannada.in):  ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದಿ ಮಾದಪ್ಪ ಮತ್ತೆ ಕೋಟ್ಯಾಧಿಪತಿಯಾಗಿದ್ದು, ಮಹಿಳೆಯರಿಗೆ ಫ್ರೀ ಬಸ್ ಎಫೆಕ್ಟ್ ನಿಂದಾಗಿ ಹುಂಡಿಯಲ್ಲಿ ಗಣನೀಯ ಏರಿಕೆಯಾಗಿದೆ.

ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೆ ಪ್ರಾಧಿಕಾರ ಮತ್ತು ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿಗಳಿಂದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,  ಬರೋಬ್ಬರಿ 2.38 ಕೋಟಿ ನಗದು, 3 ಕೆ.ಜಿ ಬೆಳ್ಳಿ ಮತ್ತು 63 ಗ್ರಾಂ ಚಿನ್ನ ಸಂಗ್ರಹವಾಗಿದೆ.  ನೂತನ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು.

ದಿನದಿಂದ ದಿನಕ್ಕೆ ಮಾದಪ್ಪನ ಹುಂಡಿಯಲ್ಲಿ ಕಾಣಿಕೆ ಹಣ ಹೆಚ್ಚುತ್ತಿದೆ. ಉಚಿತ ಬಸ್ ಪ್ರಯಾಣದಿಂದ ಧಾರ್ಮಿಕ ಕೇಂದ್ರಗಳತ್ತ ಮಹಿಳಾ ಮಣಿಗಳು ದಾಂಗುಡಿ ಇಡುತ್ತಿದ್ದು ದೇವಾಲಯದ ಆದಾಯಗಳಲ್ಲಿ ಏರಿಕೆಯಾಗುತ್ತಿದೆ  ಕರ್ನಾಟಕ ಶ್ರೀಮಂತ ದೇವಾಲಯಗಳಲ್ಲಿ ಒಂದಾದ  ಮಲೆ ಮಹದೇಶ್ವರ ಶ್ರೀ ಕ್ಷೇತ್ರದಲ್ಲಿ  ಕೇವಲ ಒಂದು ತಿಂಗಳ ಎಣಿಕೆಯಲ್ಲಿ ಕೋಟ್ಯಾಂತರ ನಗದು ಸಂಗ್ರಹವಾಗಿದೆ.

ಚಿನ್ನದ ರಥ, ಬೆಳ್ಳಿರಥ, ಹುಲಿವಾಹನ, ಬಸವ ವಾಹನ, ಸೇವೆ ಎಂದು  ಸಾವಿರಾರು ರೂಪಾಯಿಗಳ ಟಿಕೆಟ್ ಪಡೆದು ಭಕ್ತರು ಹರಕೆ ತೀರಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ  ವಿವಿಧ ಮೂಲಗಳಿಂದ ವಾರ್ಷಿಕ ನೂರು ಕೋಟಿಗೂ ಹೆಚ್ಚು ಆದಾಯ  ಬರುತ್ತಿದೆ.

Key words: Hundi -Counting -Male Mahadeshwara Hill- 2.38 crore Rs. -Collection