ಹೈಟೆಕ್ ಆಗಲಿದೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ….

ಬೆಂಗಳೂರು ಫೆಬ್ರವರಿ 11,2021(www.justkannada.in):  ಹೈಟೆಕ್ ಆಗಲಿದೆ ನಮ್ಮ ಬೆಂಗಳೂರಿನ ಕಂಠೀರವ ಕ್ರೀಡಾಂಗಣ. ಸಂಪೂರ್ಣ ಹೊಸ ರೂಪದೊಂದಿಗೆ ಕ್ರೀಡಾಪಟುಗಳಿಗೆ ಸುಸಜ್ಜಿತವಾದ ಕ್ರೀಡಾಂಗಣ ತಲೆ ಎತ್ತಿ ನಿಲ್ಲಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾಂಗಣವನ್ನ ಉನ್ನತೀಕರಿಸಲು ಉದ್ದೇಶಿಸಲಾಗಿದೆ. ಈಗಾಗಲೆ ನೀಲನಕ್ಷೆ (ಡಿಪಿಆರ್) ಸಿದ್ದವಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣದ ಉನ್ನತೀಕರಣಕ್ಕೆ ಉದ್ದೇಶಿಸಲಾಗಿದೆ. ಸದ್ಯ ಮಾತುಕತೆ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಅಂತಿಮ ರೂಪ ನೀಡಲಾಗುವುದು ಎಂದು ಯುವ ಸಬಲೀಕರಣ ಹಾಗೂ ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.high-tech-bangalore-kanteerava-stadium

ಬೆಂಗಳೂರಿನ ಹೃದಯಭಾಗದಲ್ಲಿರುವ ಕಂಠೀರವ ಕ್ರೀಡಾಂಗಣವನ್ನ ಪಿಪಿಪಿ ಮಾದರಿಯಲ್ಲಿ ಹೈಟೆಕ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳ ಜೊತೆ ವಿಧಾನ ಸೌಧದಲ್ಲಿ ಸಭೆ ನಡೆಸಿ, ಚರ್ಚೆ ನಡೆಸಿದರು.

ಖಾಸಗಿ ಸಹಭಾಗಿತ್ವಕ್ಕಾಗಿ ಕಂಪೆನಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, 2 ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಒಳಾಂಗಣ ಸೇರಿದಂತೆ ಇಡಿ ಕ್ರೀಡಾಂಗಣವನ್ನ ಹೈಟೆಕ್ ಮಾಡಲು ನೀಲನಕ್ಷೆ ಸಿದ್ದಪಡಿಸಲಾಗಿದೆ. ಜೊತೆಗೆ ಬಹುಮಹಡಿ ಕಟ್ಟಡ, ತ್ರಿತಾರಾ ಹೊಟೆಲ್ ಮತ್ತು ಪಂಚತಾರಾ ಹೊಟೇಲ್‍ಗಳು, ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು ಒಳಗೊಂಡಿರಲಿವೆ. ಜೊತೆಗೆ ಜಿಲ್ಲೆಗಳ ಕ್ರೀಡಾಂಗಣವನ್ನೂ ಉನ್ನತೀಕರಿಸಲು ಉದ್ದೇಶಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕ್ರೀಡಾಂಗಣದ ಅಭಿವೃದ್ದಿಗೆ ಖಾಸಗಿ ಕಂಪೆನಿಗಳು ಮುಂದೆಬಂದಲ್ಲಿ, ಅವರೊಂದಿಗೆ ಮಾತುಕತೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಕ್ರೀಡಾಂಗಣದ ಅಭಿವೃದ್ಧಿಗೆ ಸಿಎಸ್‍ಆರ್ ಫಂಡ್ ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ರಾಜ್ಯದಿಂದ ಓಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಬೇಕು ಎನ್ನುವುದೇ ಇದರ ಮೂಲ ಉದ್ದೇಶ. ಓಲಂಪಿಕ್‍ನ 14 ವಿಧದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು 100ಕ್ಕೂ ಹೆಚ್ಚು ಕ್ರೀಡಾಪಟುಗಳು ಸಿದ್ದವಾಗಬೇಕು, ಕನಿಷ್ಟ 50 ಕ್ರೀಡಾಪಟುಗಳಾದರೂ ಅರ್ಹತೆ ಪಡೆಯಬೇಕು. ಆ ನಿಟ್ಟಿನಲ್ಲಿ ಅಗತ್ಯವಿರುವ ಕ್ರೀಡಾಸೌಲಭ್ಯ, ತರಬೇತಿ ನೀಡಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈ ಚಳಿ ಬಿಟ್ಟು ಕೆಲಸ ಮಾಡಿ…

ಕ್ರೀಡೆಗೆ ಅಗತ್ಯವಾದ ಎಲ್ಲ ಸೌಲಭ್ಯ ನೀಡಲು ಸರ್ಕಾರ ಸಿದ್ದವಿದೆ. ಕೇವಲ ಅನುದಾನ ನೀಡಿದ ಮಾತ್ರಕ್ಕೆ ಎಲ್ಲವೂ ಸಾಧ್ಯವಾಗುವುದಿಲ್ಲ. ಸರ್ಕಾರ ನೀಡಿದ ಸೌಲಭ್ಯವನ್ನ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು. ಇದಕ್ಕೆ ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಮಾಡಬೇಕು. ಮೀಸಲಿಟ್ಟ ಅನುದಾನ ಬಳಕೆಯಾಗದೆ ಉಳಿದರೆ ಅಥವಾ ಸರಿಯಾದ ರೀತಿಯಲ್ಲಿ ಕಾರ್ಯ ಅನುಷ್ಠಾನವಾಗದ್ದರೆ ಕ್ರೀಡಾಪಟುಗಳ ಬದುಕನ್ನೇ ನಾಶಮಾಡಿದಂತಾಗುತ್ತದೆ. ಅಧಿಕಾರಿಗಳು ಈ ವಿಚಾರವನ್ನ ಗಮನದಲ್ಲಿಟ್ಟುಕೊಂಡು ಅಹರ್ನಿಶಿ ಕೆಲಸ ಮಾಡಬೇಕು ಎಂದು ಸಚಿವ ನಾರಾಯಣಗೌಡ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೆಕ್ಕ ಶೀರ್ಷಿಕೆ ಪರಿಶೀಲಿಸಿದಾಗ ಜಿಲ್ಲಾ ಮಟ್ಟದಲ್ಲಿ ಹಂಚಿಕೆಯಾದ ಅನುದಾನ ಕಡಿಮೆ ಪ್ರಮಾಣದಲ್ಲಿ ವೆಚ್ಚವಾಗಿದ್ದನ್ನು ಗಮನಿಸಿದ ಸಚಿವ ನಾರಾಯಣಗೌಡ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀಡಿದ ಅನುದಾನವನ್ನೇ ಬಳಸಿಲ್ಲ ಎಂದಾದಲ್ಲಿ ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದೀರಿ. ಮತ್ತೆ ಈ ರೀತಿ ಆದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.high-tech-bangalore-kanteerava-stadium

1 ಸಾವಿರ ಕೋಟಿ ಅನುದಾನಕ್ಕೆ ಪ್ರಸ್ತಾವನೆ.

ಪಂಜಾಬ್, ಹರಿಯಾಣದಂತ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಕ್ರೀಡೆಗೆ ನೀಡುತ್ತಿರುವ ಅನುದಾನ ತೀರಾ ಕಡಿಮೆ ಇದೆ. ಹೀಗಾಗಿ ಸದ್ಯ ನೀಡುತ್ತಿರುವ ಅನುದಾನಕ್ಕಿಂತ ಮೂರು ಪಟ್ಟು ಹೆಚ್ಚು ಅಂದರೆ,  ಕನಿಷ್ಟ 1 ಸಾವಿರ ಕೋಟಿ ರೂ. ಅನುದಾನವನ್ನ ಮುಂದಿನ ಬಜೆಟ್‍ನಲ್ಲಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಯುವಜನ ಮೇಳದಲ್ಲಿ ಉದ್ಯೋಗ ಮೇಳ

ಇತ್ತೀಚಿನ ದಿನಗಳಲಿ ಯುವಜನತೆ ದಾರಿತಪ್ಪುತ್ತಿದ್ದು, ದುಶ್ಚಟಗಳ ದಾಸ್ಯಕ್ಕೆ ಸಿಲುಕುತ್ತಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಯುವ ಸಬಲೀಕರಣಕ್ಕಾಗಿ ನೂತನ ಯೋಜನೆ ರೂಪಿಸುತ್ತಿದೆ. `ಯುವ ನೀತಿ’ಗೆ ಹೊಸ ರೂಪ ನೀಡಿ, ಯುವ ಜನತೆಗೆ ಹೆಚ್ಚಿನ ಆಧ್ಯತೆ ನೀಡಲು ಉದ್ದೇಶಿಸಲಾಗಿದೆ. ಯುವ ಜನ ಮೇಳ ಆಯೋಜಿಸಿ, ಮಾನಸಿಕ ಸದಢೃತೆ, ಕೌಶಲ್ಯತೆ ಹೆಚ್ಚಿಸಲು ಚಿಂತಿಸಲಾಗಿದೆ. ಅಲ್ಲದೆ ಯುವ ಜನ ಮೇಳವನ್ನ ಉದ್ಯೋಗಮೇಳವನ್ನಾಗಿ ಪರಿವರ್ತಿಸುವ ಮೂಲಕ ಯುವ ಜನತೆಗೆ ಉದ್ಯೋಗ ಸೃಷ್ಟಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 2.5 ಕೋಟಿ ಯುವಜನರಿದ್ದು, ಹೊಸ ಯುವ ನೀತಿಯಿಂದ ಅವರೆಲ್ಲರನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಚಿಂತನೆ ಇದೆ.

ಸಭೆಯಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ್, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words:  high-tech – Bangalore-kanteerava stadium.