ಹೆಚ್ ಡಿಕೆ ಬಗ್ಗೆ ಕಾಂಗ್ರೆಸ್ ಶಾಸಕನ ಟೀಕೆಗೆ ಬೇಸರ ವ್ಯಕ್ತಪಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಮಾರ್ಚ್,30, 2024 (www.justkannada.in):  ಮಂಡ್ಯ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಗ್ಯ ವಿಚಾರದ ಬಗ್ಗೆ ಟೀಕಿಸಿದ  ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ನಡೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾತಾಡುವಾಗ ನಮ್ಮ ನಾಲಗೆ ಮೇಲೆ ಹಿಡಿತವಿರಬೇಕು, ಯಾವುದೇ ಪಕ್ಷದವರಾಗಿಲಿ, ರಾಜಕಾರಣದಲ್ಲಿ ಯಾವತ್ತೂ ವೈಯಕ್ತಿಕ ಟೀಕೆಗಳನ್ನು ಮಾಡಬಾರದು. ಬೇರೆಯವರು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತಾಡುತ್ತಾರೆ, ಅದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಏನೇನೋ ಮಾತಾಡುವುದು ಸರಿಯಲ್ಲ, ಅದು ಬೇರೆ ಪಕ್ಷದ ನಾಯಕನ ಅರೋಗ್ಯದ ವಿಷಯವಾಗಿರಬಹುದು, ಅಥವಾ ಮತ್ತೇನೋ ಖಾಸಗಿ ವಿಷಯ ಆಗಿರಬಹುದು, ಅದನ್ನು ಸಾರ್ವಜನಿಕವಾಗಿ ಚರ್ಚಿಸುವ ಪ್ರಯತ್ನಕ್ಕೆ ಯಾವತ್ತೂ ಕೈ ಹಾಕಬಾರದೆಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳವಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ್ದ ರಮೇಶ್  ಬಂಡಿಸಿದ್ದೇಗೌಡ, ಚುನಾವಣಾ ಸಮಯದಲ್ಲೇ ಕುಮಾರಸ್ವಾಮಿಯವರ ಆರೋಗ್ಯ ಯಾಕೆ ಹದಗೆಡುತ್ತದೆ? ಹೃದಯ ಶಸ್ತ್ರಚಿಕಿತ್ಸೆಗೊಳಗಾದವರು ಅದು ಹೇಗೆ ಆಪರೇಶನ್ ಆದ ಕೇವಲ ಮೂರು ದಿನಗಳ ನಂತರ  ಪ್ರವಾಸ ಮಾಡುತ್ತಾರೆ ಹೇಗೆ ಎಂದು  ಹಾರ್ಟ್ ಆಪರೇಶನ್ ಬಗ್ಗೆ ಹಗುರವಾಗಿ ಮಾತನಾಡಿದ್ದರು.

Key words: HD Kumaraswamy, G. Parameshwar, MLA