ಸರ್ಕಾರಿ ಅತಿಥಿ ಗೃಹದಲ್ಲಿ ತಹಶೀಲ್ದಾರ್ ಗಳಿಂದ ಗುಂಡು ತುಂಡು ಪಾರ್ಟಿ: ನೋಟೀಸ್ ಜಾರಿ ಮಾಡಿದ ಹಾಸನ ಡಿಸಿ ಗಿರೀಶ್…

ಹಾಸನ,ಅ,5,2019(www.justkannada.in): ಸರ್ಕಾರಿ ಅತಿಥಿ ಗೃಹದಲ್ಲೇ ಹಾಸನ ಜಿಲ್ಲೆಯ ಆರು ತಾಲ್ಲೂಕುಗಳ ತಹಶೀಲ್ದಾರ್ ಗಳು ಮಧ್ಯರಾತ್ರಿವರೆಗೆ  ಗುಂಡು ತುಂಡು ಪಾರ್ಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆ ಹೊಳೆನರಸೀಪುರದ ಐಬಿಯಲ್ಲಿ ಒಂದೇ ಬ್ಯಾಚ್ ನ ಆರು ತಹಶೀಲ್ದಾರ್ ಗಳು ಗುಂಡು ತುಂಡು  ಪಾರ್ಟಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇಘನಾ ಸೇರಿ ಸಕಲೇಶಪುರ, ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು ತಹಶೀಲ್ದಾರ್ ಗಳು ಪಾರ್ಟಿ ನಡೆಸಿದ್ದು ಈ ವೇಳೆ ಬಿಜೆಪಿ ಕಾರ್ಯಕರ್ತರು ಐಬಿಗೆ‌ ನುಗ್ಗಿ‌ ಪ್ರಶ್ನೆಮಾಡಿದ್ದಾರೆ. ಒಳ ನುಗ್ಗಿದ ಬಿಜೆಪಿ ಕಾರ್ಯಕರ್ತರ ಗುಂಪು ವೀಡಿಯೋ ಮಾಡಿದ್ದು, ಕ್ಯಾಮೆರಾ ಕಂಡ ತಕ್ಷಣ ತಹಶೀಲ್ದಾರ್ ಗಳು ಓಡಿ ಹೋಗಿದ್ದಾರೆ. ಕೆಲ ತಹಶೀಲ್ದಾರ್ ಗಳು ಸ್ಥಳದಿಂದ ಎದ್ದು ಮರೆಯಾಗಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬಿಜೆಪಿ ಕಾರ್ಯಕರ್ತರ  ಜತೆಯೇ ವಾಗ್ವಾದ ನಡೆಸಿದ್ದಾರೆ. ಅಕ್ರಮ ಪ್ರವೇಶ ಆರೋಪದಲ್ಲಿ ಎಲ್ಲರನ್ನೂ ಬಂಧಿಸುವಂತೆ ಹೊಳೆನರಸೀಪುರ ತಹಸಿಲ್ದಾರ್ ಸೂಚನೆ ನೀಡಿದ ಹಿನ್ನೆಲೆ ಅಧಿಕಾರಿ ಆದೇಶದಂತೆ ವೀಡಿಯೋ ಮಾಡಿದ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷನನ್ನ ಪೊಲೀಸರು ಬಂಧಿಸಿದ ಘಟನೆ ನಡೆಯಿತು.

ತಹಸಿಲ್ದಾರ್ ಗಳಿಗೆ  ವಿವರಣೆ ಕೇಳಿ ನೋಟೀಸ್ ಜಾರಿ ಮಾಡಿದ ಹಾಸನ ಡಿಸಿ ಗಿರೀಶ್..

ಸರ್ಕಾರಿ ಅತಿಥಿ ಗೃಹದಲ್ಲಿ ತಹಸಿಲ್ದಾರ್ ಊಟ , ಮದ್ಯಪಾನ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ತಹಸಿಲ್ದಾರ್ ಗಳಿಗೆ  ಹಾಸನ ಜಿಲ್ಲಾಧಿಕಾರಿ ಗಿರೀಶ್ ನೋಟೀಸ್ ಜಾರಿ ಮಾಡಿದ್ದಾರೆ.

ಮಾಧ್ಯಮಗಳ ವರದಿ , ವಿಡಿಯೋ ವೈರಲ್ ಆದ ಹಿನ್ನೆಲೆ ಕಾರಣ ಕೇಳಿ ನೋಟೀಸ್  ಜಾರಿ ಮಾಡಲಾಗಿದ್ದು ಮೂರು ದಿನದಲ್ಲಿ ನೋಟೀಸ್ ಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

ನಾವು ಖಾಸಗಿಯಾಗಿ ಅಡುಗೆ ಮಾಡಿಸಿ ಊಟಕ್ಕೆ ಸೇರಿಕೊಂಡಿದ್ದು ನಿಜ- ಸ್ಪಷ್ಟನೆ ನೀಡಿದ ಹೊಳೆನರಸೀಪುರ ತಹಶಿಲ್ದಾರ್ ಶ್ರೀನಿವಾಸ್

ಈ ಬಗ್ಗೆ  ಸ್ಪಷ್ಟನೆ ನೀಡಿರುವ ಹೊಳೆನರಸೀಪುರ ತಹಶಿಲ್ದಾರ್ ಶ್ರೀನಿವಾಸ್ , ನಾವು ಖಾಸಗಿಯಾಗಿ ಅಡುಗೆ ಮಾಡಿಸಿ ಊಟಕ್ಕೆ ಸೇರಿಕೊಂಡಿದ್ದು ನಿಜ.ನಾವೆಲ್ಲಾ ತಹಶಿಲ್ದಾರರು ಜೊತೆಯಾಗಿ ಊಟ ಮಾಡಿದೆವು.ಸಂಸದರೊಂದಿಗೆ ಸಭೆ ಇತ್ತು, ಆದ್ದರಿಂದ ನಾವೆಲ್ಲಾ ಸಭೆ ಮುಗಿಸಿ ಬಂದಿದ್ದು ತಡವಾಗಿತ್ತು. ನಮ್ಮ ಸಿಬ್ಬಂದಿ ಯಾರೂ ಮದ್ಯಪಾನ ಮಾಡಲಿಲ್ಲ. ನಮ್ಮೊಂದಿಗೆ ಖಾಸಗಿ ವ್ಯಕ್ತಿ ಮತ್ತು‌ ಭಟ್ಟರು ಮದ್ಯಪಾನ‌ ಮಾಡಿಕೊಂಡು ಹೋದರು ಎಂದು ಹೇಳಿದರು.

ನಾವು ಊಟ‌ಮಾಡುವ ಸಂದರ್ಭದಲ್ಲಿ ಪಕ್ಕದ ರೂಂ‌ನಲ್ಲಿ ಇದ್ದವರು ಬಂದು ಅಸಭ್ಯವಾಗಿ ನಡೆದುಕೊಂಡರು. ಅಸಭ್ಯವಾದ ವರ್ತನೆ ತೋರಿದರು.ಆಗ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು.  ನಾವು ಖಾಸಗಿಯಾಗಿ ಊಟ ಮಾಡಿದ್ದು ತಪ್ಪಾ? ತಹಶಿಲ್ದಾರ್ಗಳು ಖಾಸಗಿಯಾಗಿ ಸೇರಿ ಊಟ ಮಾಡೋದು ತಪ್ಪಲ್ಲ. ನಾನೂ ಕೂಡ ಜವಾಬ್ದಾರಿ ಸ್ಥಾನದಲ್ಲಿ ಇದ್ದು ತಪ್ಪು ಮಾಡೋಲ್ಲ. ನಮ್ಮಳೊಗೆ ಯಾರೂ ಕೂಡ ಮದ್ಯಪಾನ‌ ಮಾಡಿರಲಿಲ್ಲ. ಪ್ರಾಮಾಣಿಕವಾಗಿ ಹೇಳುತ್ತೇನೆ. ನಾವು ಊಟ‌ ಮಾಡಿದ್ದನ್ನು ಮೋಜು ಮಸ್ತಿಯ ಬಣ್ಣ ಕಟ್ಟಲು ಪ್ರಯತ್ನಿಸಿದರು. ನಮ್ಮ ಖಾಸಗಿ ಸ್ಥಳಕ್ಕೆ ಅವರು ಬಂದಿದ್ದು ಮೊದಲ ತಪ್ಪು. ಸಂವಿಧಾನವೇ ವ್ಯಕ್ತಿಗೆ ಖಾಸಗಿತನ ಕೊಟ್ಟಿದೆ. ಇದಕ್ಕೆ ಧಕ್ಕೆ ತಂದಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.

ಮಹಿಳಾ ಅಧಿಕಾರಿಗಳು ನಾನ್ ವೆಜ್ ಸಹ ತಿನ್ನಲಿಲ್ಲ. ಅವರು ಐಸ್ ಕ್ರೀಂ‌ ಮಾತ್ರ ತಿಂದ್ರು. ನಮ್ಮೊಂದಿಗಿದ್ದ ನನ್ನ‌ ಸ್ನೇಹಿತರೊಬ್ಬರು ಮದ್ಯ ಬಳಸಿದ್ದರು. ನಾವ್ಯಾರು ಮದ್ಯಪಾನ‌ಮಾಡಿಲ್ಲ. ನಮ್ಮ‌ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ದೂರು ದಾಖಲಿಸಿದ್ದೇನೆ. ನ್ಯಾಯಾಲಯ ದಲ್ಲಿ ಹೋರಾಡುತ್ತೇನೆ ಎಂದು  ತಹಶಿಲ್ದಾರ್  ಶ್ರೀನಿವಾಸ್ ಸ್ಪಷ್ಟನೆ ನೀಡಿದರು.

ಬಿಜೆಪಿ ಯುವಮೋರ್ಚ ಅಧ್ಯಕ್ಷ ನಾಗೇಶ್ ಸೇರಿ ಐವರ ವಿರುದ್ಧ ಕೇಸ್ ದಾಖಲು…

ಹಾಸನ- ಸರ್ಕಾರಿ ಅತಿಥಿಗೃಹದಲ್ಲಿ ಅಧಿಕಾರಿಗಳ ಪಾರ್ಟಿ ಆರೋ‌ಪ ಪ್ರಕರಣ ಬಿಜೆಪಿ ಯುವಮೋರ್ಚ ಅಧ್ಯಕ್ಷ ನಾಗೇಶ್ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.  ಅಕ್ರಮವಾಗಿ ಕೊಠಡಿಗೆ ನುಗ್ಗಿ ವೀಡಿಯೋ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

Key words: Hassan-Party – tahsildars – Government -Guest House-Hassan DC – notice.