ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ದಸರಾ ಉದ್ಘಾಟಕ ಹಂಸಲೇಖ.

ಮೈಸೂರು,ಅಕ್ಟೋಬರ್,14,2023(www.justkannada.in):  ಮೈಸೂರು ದಸರಾ ಉದ್ಘಾಟಕರಾದ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಹಂಸಲೇಖ ಅವರಿಗೆ ಪೂರ್ಣಕುಂಭ,ವಾದ್ಯಗೋಷ್ಠಿ ಮೂಲಕ ಸ್ವಾಗತ ಕೋರಲಾಯಿತು. ಮೈಸೂರು ಜಿಲ್ಲಾಡಳಿತ ವತಿಯಿಂದಲೂ ಹಂಸಲೇಖರಿಗೆ ಸ್ವಾಗತ ಕೋರಲಾಯಿತು. ತಹಸೀಲ್ದಾರ್ ರಕ್ಷಿತ್ ಅವರು ಹಂಸಲೇಖರನ್ನ ಸ್ವಾಗತಿಸಿದರು. ನಂತರ ಹಂಸಲೇಖ ಅವರು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಸುತ್ತೂರು ಶ್ರೀಗಳು ದಸರಾ ಉದ್ಘಾಟಕ ಹಂಸಲೇಖರನ್ನ ಸನ್ಮಾನಿಸಿದರು.

ಇದೇ ವೇಳೆ  ಲತಾ ಹಂಸಲೇಖ ಸುತ್ತೂರು ಶ್ರೀಗಳ ಮುಂದೆ ಬಸವಣ್ಣನವರ ವಚನ ಹಾಡಿದರು.  ಲತಾ ಹಂಸಲೇಖರ ವಚನಕ್ಕೆ ಹಂಸಲೇಖ ಸಂಗೀತ ನುಡಿಸಿದ್ದು ಲತಾ ಹಂಸಲೇಖರ ವಚನಕ್ಕೆ ಮಠದ ಭಕ್ತರು ಮನಸೋತರು.

ಈ ವೇಳೆ ಮಾತನಾಡಿದ ಸುತ್ತೂರು ದೇಶಿಕೇಂದ್ರ  ಸ್ವಾಜೀಜಿಗಳು, ಮೈಸೂರು ದಸರಾ ಉದ್ಘಾಟನೆ ಮಾಡೋದು ಅಂದರೆ ಅದೊಂದು ಸೌಭಾಗ್ಯ. ಇಡಿ ದೇಶದಲ್ಲಿ ವಿಶ್ವ ವಿಖ್ಯಾತ ಅಂತ ಇರೋದು ಮೈಸೂರು ದಸರಾಗೆ ಮಾತ್ರ. ಹಂಸಲೇಖರ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೆ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರೋರು. ಹಂಸಲೇಖರವರು ಒಬ್ಬ ದೇಸಿ ಪ್ರತಿಭೆ. ಜಯಚಾಮರಾಜೇಂದ್ರ ಒಡೆಯರ್ ರವರು ವಿದೇಶ ಪ್ರವಾಸ ಕೈಗೊಂಡಾಗ ಮಠಕ್ಕೆ ಭೇಟಿ ನೀಡುತ್ತಿದ್ರು. ಮಠಕ್ಕು ಮೈಸೂರಿನ ಅರಮನೆಗೂ ಅವಿನಾಭಾವ ಸಂಬಂಧವಿದೆ. ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಕಳೆದ ಭಾರಿ ರಾಷ್ಟ್ರಪತಿಗಳು ರಾಜ್ಯಪಾಲರು ಎಲ್ಲರೂ ಉದ್ಘಾಟನೆ ಮಾಡಿದ್ದಾರೆ.ಈ ಬಾರಿ ದೇಸಿಯ ಪ್ರತಿಭೆಯವರು ಉದ್ಘಾಟನೆ ಮಾಡಿರೋದು ದೇಸಿಯತೆಗೆ ಸಿಕ್ಕ ಗೌರವ. ಹಂಸಲೇಖರವರು ಇಂದು ಮಠಕ್ಕೆ ಭೇಟಿ ನೀಡಿದ್ದು ಖುಷಿಯಾಗಿದೆ ಎಂದರು.

Key words: Hamsalekha – visited- Sattur Mutt – received – blessings