ಸಂಸದೆ ಸುಮಲತಾ ಅಂಬರೀಶ್ ಬಳಿ ಕ್ಷಮೆಯಾಚನೆ’: ಸಚಿವ ಸ್ಥಾನ ನೀಡಿದ್ರೆ ನಿಭಾಯಿಸಲು ಸಿದ್ದ ಎಂದ್ರು ಹೆಚ್.ವಿಶ್ವನಾಥ್…

ಬೆಂಗಳೂರು, ಜೂನ್,4,2019(www.justkannada.in):  ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನೆಡೆ ಕಾರಣ ನೀಡಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್,ವಿಶ್ವನಾಥ್ ಅವರು ಸಚಿವ ಸ್ಥಾನ ನೀಡಿದರೇ ನಿಭಾಯಿಸಲು ಸಿದ್ದ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್, ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುವೆ. ಆದ್ರೆ ಯಾರ ಮನೆಯ ಬಾಗಿಲಿಗೂ ಹೋಗಲ್ಲ ಎಂದರು.

ಪಕ್ಷದ ರಾಜ್ಯಾಧ್ಯಕ್ಷನಾಗಿ ಈ ಹಿಂದೆ ಕೂಡಾ ಕ್ಷಮೆಯಾಚಿಸಿದ್ದೇನೆ. ಸುಮಲತಾ ಅವರು ಮಂಡ್ಯದ ಸೊಸೆ, ನಮ್ಮ ಮನೆ ಮಗಳು, ಅವರ ಮನಸ್ಸಿಗೆ ನೋವಾಗುವಂತೆ ಯಾರೇ ಮಾತನಾಡಿದ್ದರೂ, ನಿಂದನೆ ಮಾಡಿದ್ದರೂ ಈ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ. ಹಾಗೆಯೇ ಎಲ್ಲರ ಬಳಿಯೂ ಕ್ಷಮೆ ಕೋರುತ್ತೇನೆ  ಎಂದು ವಿಶ್ವನಾಥ್ ಹೇಳಿದರು.

ನಿಖಿಲ್ ಮತ್ತು ಹೆಚ್ ಡಿಡಿ ಸೋಲಿಗೆ ಕಾರಣ ತಿಳಿಸಿದ ಹೆಚ್ ವಿಶ್ವನಾಥ್..

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ತುಮಕೂರಿನಲ್ಲಿ ಹೆಚ್ ಡಿ ದೇವೇಗೌಡರ ಸೋಲಿಗೆ ಕಾರಣ ತಿಳಿಸಿದ ಹೆಚ್ ವಿಶ್ವನಾಥ್,  ಮೈಸೂರು ಕ್ಷೇತ್ರದಿಂದ ದೇವೇಗೌಡರಿಗೆ ಟಿಕೆಟ್ ಕೇಳಲಾಗಿತ್ತು, ಆದರೆ, ತುಮಕೂರು ಖೆಡ್ಡಾದಲ್ಲಿ ದೇವೇಗೌಡರು ಬೀಳುವಂತೆ ಮಾಡಿದರು. ದೇವೇಗೌಡರ ಸೋಲು ನಾಡಿನ ಸೋಲಾಯಿತು. ಇಡಿ ನಾಡಿನ ಹಿತಕ್ಕೆ  ಮಾರಕವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗಯೇ ಮಂಡ್ಯದಲ್ಲಿ ನಿಖಿಲ್ ಸೋಲಲು ಕೊಂಕು ನುಡಿಗಳೇ ಕಾರಣ. ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕರ ಹೇಳಿಕೆಯಿಂದ  ಜವಾಬ್ದಾರಿ  ಇಲ್ಲದ ಕೊಂಕು ನುಡಿಗಳಿಂದ ನಿಖಿಲ್ ಸೋಲಬೇಕಾಯಿತು ಎಂದು ಹೆಚ್.ವಿಶ್ವನಾಥ್ ಕಾರಣ ತಿಳಿಸಿದರು.

ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕಿರುಕುಳ..

ಮೈತ್ರಿ ಸರ್ಕಾರದಲ್ಲಿ ಮಿತ್ರರಿಂದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕಿರುಕುಳ ಆಗುತ್ತಿದೆ. ಅನಾರೋಗ್ಯ ಮತ್ತು ಕಿರುಕುಳ ಸಹಿಸಿಕೊಂಡು ಶಕ್ತಿ ಮೀರಿ ಹೆಚ್.ಡಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

Key words: H. Vishwanath apologized to Sumalatha Ambarish

#Bangalore #HVishwanath #Sumalatha Ambarish #Ministerialposition