ಪಕ್ಷೇತರ ಸ್ಪರ್ಧೆಗೆ ಒಲವು: ಸುಳಿವು ಬಿಟ್ಟುಕೊಟ್ಟ ಜಿಟಿ ದೇವೇಗೌಡ

ಮೈಸೂರು, ಜುಲೈ 11, 2021 (www.justkannada.in): ಪಕ್ಷೇತರ ಸ್ಪರ್ಧೆಗೆ ಒಲವು ಜಿಟಿ ದೇವೇಗೌಡ ಒಲವು ವ್ಯಕ್ತಪಡಿಸಿದ್ದು, ಈ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಎರಡು ವರ್ಷಗಳಿಂದ ಜೆಡಿಎಸ್​ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರಬೇಕೋ? ಜೆಡಿಎಸ್​ನಲ್ಲೇ ಇರಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಿಲ್ಲ. ಪಕ್ಷೇತರವಾಗಿ ನಿಂತರೂ ಅಚ್ಚರಿ ಪಡಬೇಕಿಲ್ಲ ಎಂದು ಜಿಟಿಡಿ ಮೈಸೂರಿನಲ್ಲಿ ಹೇಳಿದ್ದಾರೆ.

ನಾನು ಮತ್ತು ನನ್ನ ಮಗ ಹರೀಶ ಇಂಡಿಪೆಂಡೆಂಟ್ ಆಗಿ ನಿಂತರೂ ಗೆಲ್ಲುತ್ತೇವೆ. ಚಾಮುಂಡೇಶ್ವರಿ, ಚಾಮರಾಜ, ಹುಣಸೂರು, ಕೆ.ಆರ್.ನಗರ ಎಲ್ಲಿ ನಿಂತರೂ ಗೆಲ್ಲುತ್ತೇವೆ. ಜನರ ಪ್ರೀತಿ, ವಿಶ್ವಾಸದಿಂದ ಧೈರ್ಯ ಬಂದಿದೆ. ಸ್ವತಂತ್ರವಾಗಿ ನಿಲ್ಲುವ ಮಾರ್ಗ ಇದ್ದೇ ಇದೆ. ಪಕ್ಷೇತರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತೇವೆ ಅನ್ನುವ ವಿಶ್ವಾಸ ಇದೆ. ಇಷ್ಟು ವರ್ಷ ರಾಜಕಾರಣ ಮಾಡಿದ್ದರಿಂದ ಧೈರ್ಯ ಬಂದಿದೆ ಎಂದು ಹೇಳಿದ್ದಾರೆ.

ಜನ ಕೂಡ ನಮಗೆ ಪಕ್ಷ ಬೇಡ, ಜಿ.ಟಿ.ದೇವೇಗೌಡರು ಬೇಕು ಅಂತಿದ್ದಾರೆ. ಇನ್ನೂ ಎರಡು ವರ್ಷ ಸಮಯಾವಕಾಶ ಇದೆ. ಸನ್ನಿವೇಶ ನೋಡಿಕೊಂಡು ಸೂಕ್ತ ತೀರ್ಮಾನ ಮಾಡುವುದಾಗಿ ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.