ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ- ಸಚಿವ ಎಸ್.ಟಿ.ಸೋಮಶೇಖರ್.

ಮೈಸೂರು, ಜೂನ್.14,2021(www.justkannada.in):   ಲಸಿಕೆಯನ್ನು ನೀಡುತ್ತಿರುವುದರಲ್ಲಿಯೇ ರಾಜ್ಯದಲ್ಲಿ ಮೈಸೂರು ಜಿಲ್ಲೆಯು ಮೊದಲ  ಸ್ಥಾನದಲ್ಲಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.jk

ಮಂಗಳವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಲಸಿಕೆಯನ್ನು ಶೇ.100ರಷ್ಟು ನೀಡಬೇಕು. 21ರಿಂದ ಎಲ್ಲಾ ವರ್ಗದವರಿಗೂ ನೀಡಲು ಘೋಷಣೆಯಾಗಿರುವುದರಿಂದ ಆದಷ್ಟು ಬೇಗ ಲಸಿಕೆ ಎಲ್ಲಾ ವರ್ಗದವರಿಗೂ ಸಿಗಲಿದೆ ಎಂದು ತಿಳಿಸಿದರು.

ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದ್ದು, ಮೊದಲ ಹಂತ ಪೂರ್ಣಗೊಂಡಿದೆ.  ಎರಡನೇ ಹಂತಕ್ಕೆ ಮುಖ್ಯಮಂತ್ರಿಗಳು ಅನುಮತಿ ಕೊಟ್ಟ ನಂತರ ಬಹುತೇಕ ಎಲ್ಲ ಕಡೆ ಹೋಗುತ್ತಿರುವುದರಿಂದ ಟೆಸ್ಟ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಾರದಲ್ಲಿಯೇ ಎರಡನೇ ಹಂತವು ಮುಕ್ತಯವಾಗಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಯ ಏನೇ ಇದ್ದರೂ, ಬಿ.ಪಿ.ಎಲ್ ಕಾಡ್೯ಹೊಂದಿದ ಕುಟುಂಬದ ಸದಸ್ಯರು ಕೋವಿಡ್ ನಿಂದ ನಿಧನವಾದರೆ ಅಂತಹ ಕುಟುಂಬಕ್ಕೆ ಒಂದು ಲಕ್ಷ ಪರಿಹಾರಧನ ನೀಡಲು ತೀರ್ಮಾನಿಸಲಾಗಿದೆ. ಇಂತಹ ಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರ  ಈ ದಿಟ್ಟ ನಿರ್ಧಾರವನ್ನು ಸ್ವಾಗತಿಸುವುದಾಗಿ ಹಾಗೂ ಅಭಿನಂದಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಎಲ್.ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಅರಣ್ಯ ವಸತಿ ಹಾಗೂ ವಿಹಾರದಾಮಗಳ ಅಧ್ಯಕ್ಷ ಅಪ್ಪಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

Key words: vaccine –mysore-district-Minister -ST Somashekhar.