ನಾಳೆ ಸಿಎಂ ಬಿಎಸ್ ವೈ ಬಜೆಟ್ ಮಂಡನೆ ಹಿನ್ನೆಲೆ: ರೈತಸಂಘ ಮತ್ತು ಹಸಿರು ಸೇನೆ ಇಟ್ಟ ಬೇಡಿಕೆಗಳೇನು ಗೊತ್ತೆ….?

ಮೈಸೂರು,ಮಾ,4,2020(www.justkannada.in):  ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆಗಳಿಟ್ಟುಕೊಂಡಿದ್ದಾರೆ. ಈಗಾಗಲೇ ಸಿಎಂ ಬಿಎಸ್ ವೈ ಬಜೆಟ್ ನಲ್ಲಿ ಕೃಷಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ. ಈ ಮಧ್ಯೆ ರೈತ ಸಂಘ ಹಾಗೂ ಹಸಿರು ಸೇನೆ ಹಲವು ಬೇಡಿಕೆಗಳನ್ನಿಟ್ಟಿದೆ.

ನಾಳೆ ಸಿಎಂ ಬಿಎಸ್ವೈ ಬಜೆಟ್ ಘೋಷಣೆ ಹಿನ್ನೆಲೆ, ಪ್ರತ್ಯೇಕ ಕೃಷಿ ಬಜೆಟ್  ಮಂಡನೆ ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿವೆ. ಈ ಕುರಿತು ಮಾತನಾಡಿರುವ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಉತ್ತೇಜನ ನೀಡಿ ಹಸಿರು ಕರ್ನಾಟಕಕ್ಕೆ ಒತ್ತು ನೀಡಬೇಕು. ರೈತರ ಸಾಲಮನ್ನಾ ಯೋಜನೆ ಮುಂದುವರೆಸಬೇಕು. ಹಾಗೆಯೇ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಜತೆಗೆ ಕೊಡಗಿನ ಕೃಷಿಗೆ ವಿಶೇಷ ಆನುದಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಅದೇ ರೀತಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಬಡಗಲಪುರ ನಾಗೇಂದ್ರ ಅವರು, ಈ ಬಾರಿಯ ಬಜೆಟ್‌ನಲ್ಲಿ ಸ್ವಾಮಿನಾಥನ್ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

Key words: tomorrow-Budget-demands – State Farmers Association- badagalapura nagendra