ಇಲ್ಲಿಗೆ ಅಂತ್ಯವಲ್ಲ. ತಾತ್ಕಾಲಿಕ ತಡೆಯಷ್ಟೆ: ಯಾವುದೇ ಕಾರಣಕ್ಕೆ ಪಾದಯಾತ್ರೆ ನಿಲ್ಲಲ್ಲ- ಡಿ.ಕೆ ಶಿವಕುಮಾರ್.

ರಾಮನಗರ,ಜನವರಿ,13,2022(www.justkannada.in): ಜನರ ಆರೋಗ್ಯ ದೃಷ್ಠಿ ಮತ್ತು ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮೇಕೆದಾಟು ಪಾದಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಇಲ್ಲಿಗೆ ಅಂತ್ಯವಲ್ಲ. ತಾತ್ಕಾಲಿಕ ತಡೆಯಷ್ಟೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಪಾದಯಾತ್ರೆ ತಾತ್ಕಾಲಿಕ ಸ್ಥಗಿತದ ಬಗ್ಗೆ ಘೋಷಣೆ ಮಾಡಿದರು.

ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಈ ಪಾದಯಾತ್ರೆ ಮುಕ್ತಾಯ ಅನ್ನೋದಿಲ್ಲ. ಜನರ ಆರೋಗ್ಯ ಹಿತದೃಷ್ಠಿಯಿಂದ ಸ್ಥಗಿತಗೊಳಿಸಿದ್ದೇವೆ. ಇಲ್ಲಿಂದಲೇ ಪಾದಯಾತ್ರೆ ಪ್ರಾರಂಭಿಸುತ್ತೇವೆ. ಎಲ್ಲಾ ಧರ್ಮದ ಪರವಾಗಿ ಕೆಲಸ ಮಾಡಿದ್ದೇವೆ. ನಾವು ಹೋರಾಟದಿಂದ ಹಿಂದೆ ಸರಿಯಲ್ಲ. ಹೈಕೋರ್ಟ್ ಆದೇಶಕ್ಕೆ ತಲೆ ಬಾಗಿದ್ದೇವೆ. ಜನರ ಮುಂದೆ ನಾವು ತಪ್ಪಿತಸ್ಥರಾಗಬಾರದು. ಹೀಗಾಗಿ ಜನಾಭಿಪ್ರಾಯಕ್ಕೆ ಗೌರವ ಕೊಡುತ್ತೇವೆ ಎಂದರು.

ರಾಜ್ಯ ಸರ್ಕಾರ ಪಕ್ಷಾಪಾತಿಯಾಗಿ ವರ್ತಿಸಬಾರದು.  ಬಿಜೆಪಿಯವರು ಕೋವಿಡ್ ನಿಯಮ ಉಲ್ಲಂಘಿಸಿದ್ದರು. ಕೇವಲ ಕಾಂಗ್ರೆಸ್ ನವರ ಮೇಲೆ ಏಕೆ ಕೇಸ್  ಹಾಕುತ್ತೀರಿ. ನಮ್ಮ ಮೇಲೆ ತಪ್ಪು ಹೊರಿಸಲು ಬಿಜೆಪಿ ಹುನ್ನಾರ  ಮಾಡಿದೆ. ರಾಮನಗರದಲ್ಲಿ ಕೋವಿಡ್ ಹೆಚ್ಚಾಗಿ ಇಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೆ ಪಾದಯಾತ್ರೆ ನಿಲ್ಲಿಸೋದಿಲ್ಲ. ಮತ್ತೆ ಆರಂಭಿಸುತ್ತೇವೆ

ಸರ್ಕಾರ ಕೇಸ್ ಹಾಕಿದ್ರೂ ಹೆದರಲ್ಲ. ನಿಯಮ ಪಾಲಿಸದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಿ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.

Key words: temporary –padayatra-breakdown- DK Shivakumar.