ಬೆಂಗಳೂರಿನಲ್ಲಿ ಮೋಕ್ಷಕಾಲದಲ್ಲಿ ಕಂಕಣ ಸೂರ್ಯಗ್ರಹಣ ಗೋಚರ…

ಬೆಂಗಳೂರು,ಡಿ,26,2019(www.justkannada.in): ಇಂದು ವಿಸ್ಮಯಕಾರಿ ಕಂಕಣ ಸೂರ್ಯಗ್ರಹಣಕ್ಕೆ ನಭೋ ಮಂಡಲ ಸಾಕ್ಷಿಯಾಗಿದ್ದು ಇಂದು ಗೋಚರವಾದ ಸೂರ್ಯಗ್ರಹಣ ನೋಡಿ ಜನತೆ ಪುಳಕಿತರಾದರು. ಇಂದು ಬೆಳಗ್ಗೆ 8.04ಕ್ಕೆ ಆರಂಭವಾಗಿದ್ದ ಕಂಕಣ ಸೂರ್ಯಗ್ರಹಣವು ಬೆಳಗ್ಗೆ 11.11ಕ್ಕೆ ಮುಕ್ತಾಯದವರೆಗೂ ಕರಾವಳಿ ಭಾಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗೋಚರಿಸಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಹಿನ್ನೆಲೆ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯುಂಟಾಗಿತ್ತು. ಇದೀಗ ಮೋಕ್ಷ ಕಾಲದಲ್ಲಿ  ಸೂರ್ಯಗ್ರಹಣ ಗೋಚರವಾಗಿದೆ. ಮೋಡ ಕವಿದ ವಾತಾವರಣದಿಂದ  ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯುಂಟಾಗಿದ್ದಕ್ಕೆ ನೆಹರು ತಾರಾಲಯದ ಮುಖ್ಯಸ್ಥರಾದ ಪ್ರಮೋದ್ ಗಲಗಲಿ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ನೆಹರು ತಾರಾಲಯದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ನೆರೆದಿದ್ದ ವಿದೇಶಿ ಪ್ರಜೆಗಳು ಸಹ ಬೇಸರ ವ್ಯಕ್ತಪಡಿಸಿದ್ದರು.

ಆದರೆ ಮೋಕ್ಷ ಸಮಯದಲ್ಲಿ ಬೆಂಗಳೂರಿನಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಿದೆ ಎನ್ನಲಾಗಿದೆ.  ಇನ್ನು ರಾಜ್ಯದಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಹಿನ್ನೆಲೆ, ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಗಿದೆ. ರಾಜ್ಯದ ಹುಬ್ಬಳ್ಳಿ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಮಡಿಕೇರಿ, ಹಲವು ನಗರಗಳಲ್ಲಿಯೂ ಜನರು ಸೂರ್ಯಗ್ರಹಣವನ್ನು ಭಾರಿ ಕುತೂಹಲದಿಂದ ವೀಕ್ಷಿಸಿದ್ದಾರೆ.

Key words: Solar Eclipse- visible -during -Moksha time – Bangalore.