ಬೆಂಗಳೂರಿನ ಮತ್ತೊಬ್ಬ ಪೊಲೀಸ್ ಪೇದೆಗೆ ಅಂಟಿದ ಕೊರೊನಾ ಸೋಂಕು

ಬೆಂಗಳೂರು, ಮೇ 23, 2020 (www.justkannada.in): ಬೆಂಗಳೂರಿನ ಸಂಚಾರ ಠಾಣೆ ಕಾನ್‌ಸ್ಟೆಬಲ್‌ಗೆ ಈಗಾಗಲೇ ಕೊರೊನಾ ಸೋಂಕು ತಗುಲಿದ್ದು, ಇದೀಗ‌ ಮತ್ತೊಬ್ಬ ಕಾನ್‌ಸ್ಟೆಬಲ್‌ಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಹಾಲಕ್ಷ್ಮಿ ಲೇಔಟ್ ಶಂಕರ ನಗರದ ನಿವಾಸಿ ಆಗಿರುವ ಕಾನ್‌ಸ್ಟೆಬಲ್, ಎಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಏಪ್ರಿಲ್ 26ರಂದು ಎಸಿಬಿಯಿಂದ ಬಿಡುಗಡೆ ಮಾಡಿ ಭದ್ರತಾ ಕೆಲಸಕ್ಕಾಗಿ ಪಶ್ಚಿಮ ವಿಭಾಗ ವ್ಯಾಪ್ತಿಯ ಠಾಣೆಯೊಂದಕ್ಕೆ ನಿಯೋಜಿಸಲಾಗಿತ್ತು.

ಕಂಟೈನ್‌ಮೆಂಟ್ ಮಾಡಲಾದ ಟಿಪ್ಪುನಗರದಲ್ಲಿ ಅವರು ಭದ್ರತೆ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಇತ್ತೀಚೆಗಷ್ಟೇ ಎಲ್ಲ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಶುಕ್ರವಾರ ರಾತ್ರಿ ವರದಿ ಬಂದಿದ್ದು, ಕಾನ್‌ಸ್ಟೆಬಲ್ ವರದಿ ಪಾಸಿಟಿವ್ ಬಂದಿದೆ.