ರಾಮನಗರ ಜಿಲ್ಲೆಯವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ-ಸಂಸದ ಡಿ.ಕೆ ಸುರೇಶ್.

ರಾಮನಗರ,ಏಪ್ರಿಲ್,10,2023(www.justkannada.in):  ರಾಮನಗರ ಜಿಲ್ಲೆಯವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂದು ಸಂಸದ  ಡಿ.ಕೆ ಸುರೇಶ್ ತಿಳಿಸಿದರು.

ಈ ಬಾರಿಯೂ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆಗೆ ಮುಂದಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿಯೇನು ಘೋಷಣೆಯಾಗಲ್ಲ. ಕೆಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕರು ಹೆಸರು ಕಳಿಸಿದ್ದಾರೆ. ಮೂರು ದಿನಗಳಲ್ಲಿ ಚನ್ನಪಟ್ಟಣ ಅಭ್ಯರ್ಥಿ ಘೋಷಣೆಯಾಗುತ್ತದೆ . ಕೆಪಿಸಿಸಿ ಅಧ್ಯಕ್ಷರಿಗೆ 224 ಕ್ಷೇತ್ರಗಳ ಜವಾಬ್ದಾರಿ ಇದೆ. ನನ್ನ ಲೋಕಸಭಾ ಕ್ಷೇತ್ರದ 8 ಕ್ಷೇತ್ರದಲ್ಲಿ ನಾನು ಗಮನ ಹರಿಸಿದ್ದೇನೆ ಎಂದರು.

ಸಚಿವ ಮುನಿರತ್ನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಂಸದ ಡಿ.ಕೆ ಸುರೇಶ್,  ಸಚಿವ ಮುನಿರತ್ನರನ್ನ ನಾನು ಯಾಕೆ ಟಾರ್ಗೆಟ್ ಮಾಡಲಿ ಮುನಿರತ್ನಗೆ ಏನು ಆಗಿದೆಯೋ ಗೊತ್ತಿಲ್ಲ. ಭ್ರಮೆಯಲ್ಲಿದ್ದಾರೆ. ನಾನು ಎಲ್ಲಾ ಕಡೆ ಕೆಲಸ ಮಾಡುತ್ತಿದ್ದೇನೆ ಅದು ಅವರಿಗೆ ಕಾಣುತ್ತಿಲ್ಲ ಎಂದು ಟಾಂಗ್ ನೀಡಿದರು.

ರಾಜ್ಯ ರಾಜಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗಮನ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್,  ರಾಜ್ಯ ರಾಜಕಾರಣಕ್ಕೆ ಬರಬಾರದು ಅಂತೇನು ಇಲ್ಲ. ಕೆಪಿಸಿಸಿ ಅಧ್ಯಕ್ಷರು ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ. ಹೈಕಮಾಂಡ್ ಆದೇಶ ಪಾಲನೆ ಮಾಡುತ್ತೇವೆ ಎಂದರು.

Key words: Ramanagara- district – – candidates- Channapatna- constituency-MP DK Suresh.