ಮಾ.12 ರಂದು ಮಂಡ್ಯಕ್ಕೆ ಪ್ರಧಾನಿ ಮೋದಿ: ಮೈಸೂರು-ಬೆಂಗಳೂರು ಸಂಚಾರ ಮಾರ್ಗ ಬದಲಾವಣೆ.

kannada t-shirts

ಮಂಡ್ಯ,ಮಾರ್ಚ್,8,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಮಾರ್ಚ್ 12 ರಂದು ಮಂಡ್ಯಗೆ ಭೇಟಿ ನೀಡಲಿದ್ದಾರೆ.

ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಲಿದ್ದು ಈ ಹಿನ್ನೆಲೆಯಲ್ಲಿ ಅಂದು ಮೈಸೂರು-ಬೆಂಗಳೂರಿಗೆ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಹೀಗಾಗಿ ಅಂದು ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು ಬನ್ನೂರು, ಕಿರುಗಾವಲು, ಮಳವಳ್ಳಿ, ಹಲಗೂರು, ಕನಕಪುರದಿಂದ ಸಾಗಿ ಬೆಂಗಳೂರು ತಲುಪಬೇಕು.  ಹಾಗೆಯೇ ಮೈಸೂರಿನಿಂದ  ತುಮಕೂರಿಗೆ ಪ್ರಯಾಣ ಬೆಳೆಸುವವರು ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಹೋಗಬೇಕು.

ಬೆಂಗಳೂರು ನಗರದಿಂದ ಮೈಸೂರಿಗೆ ಆಗಮಿಸುವ ವಾಹನಗಳು ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕಿರುಗಾವಲು ಬನ್ನೂರು ಮೂಲಕ ಮೈಸೂರಿಗೆ ವಾಹನಗಳು ತೆರಳಬಹುದಾಗಿದೆ. ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವಾಹನಗಳು ಚನ್ನಪಟ್ಟಣ, ಹಲಗೂರು, ಮಳವಳ್ಳಿ ಮೂಲಕ ಕೊಳ್ಳೇಗಾಲ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಬಹುದಾಗಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು-ಮೈಸೂರು ಹೈವೇಯನ್ನು ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುವ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. 16 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಆಗಮನ ಹಿನ್ನಲೆ ಜಿಲ್ಲಾಡಳಿತ ಭಾರಿ ಎಚ್ಚರಿಕೆ ವಹಿಸುತ್ತಿದೆ.

ಸಮಾವೇಶ ನಡೆಯುವ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎಡಿಜಿಪಿ ಅಲೋಕ್ ಕುಮಾರ್ ಕೂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Prime Minister -Modi -Mandya – May 12-Mysore-Bangalore -Traffic -Change.

website developers in mysore