ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಟಾನ ಬೇಡ- ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯ.

kannada t-shirts

ಬೆಂಗಳೂರು,ಜುಲೈ,8,2021(www.justkannada.in): ಕೊರೋನಾ ಸಾಂಕ್ರಾಮಿಕ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆಗಳು ಸೇರಿ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಂಡಿರುವ ಹೊತ್ತಿನಲ್ಲಿ ಸರ್ಕಾರ ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಅನುಷ್ಠಾನಗೊಳಿಸಬಾರದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.jk

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಪ್ರಜ್ಞಾವಂತರ, ಪೋಷಕರ, ಸಾರ್ವಜನಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ, ಬೋಧಕ ಮತ್ತು ಲೇಖಕ-ಬರಹಗಾರರ ವಲಯದಲ್ಲಿ ಚರ್ಚೆ ಆಗದ ಎನ್‍ಇಪಿ-2020 ನ್ನು ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವುದೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಎನ್‍ಇಪಿ-2020 ಅನ್ನು ಇದುವರೆಗೂ ಸಂಸತ್ತಿನಲ್ಲಿ ಮಂಡಿಸಿಲ್ಲ, ಚರ್ಚೆಯೂ ಆಗಿಲ್ಲ. ಅದೇ ರೀತಿ ರಾಜ್ಯದಲ್ಲೂ ಕರಡು ಅಧಿಸೂಚನೆ ಹೊರಡಿಸಿಲ್ಲ. ವಿಧಾನಸಭೆ / ಪರಿಷತ್‍ ನಲ್ಲಿ ಚರ್ಚೆಯಾಗಿಲ್ಲ. ಸಂವಿಧಾನದ ಪರಿಚ್ಛೇದ 7ರ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಅಂದರೆ ಶಿಕ್ಷಣದ ವಿಚಾರದಲ್ಲಿ ರಾಜ್ಯಗಳಿಗೂ ಇರುವ ಸಮಾನ ಹಕ್ಕನ್ನು ಕಿತ್ತುಕೊಂಡು ಕೇಂದ್ರ ಬಲವಂತದಿಂದ ರಾಜ್ಯಗಳಲ್ಲಿ ಜಾರಿ ಮಾಡಲು ಹೊರಟಿದೆ. ಮೇಲು ನೋಟಕ್ಕೆ ಇದರಲ್ಲಿ ಹಲವು ಅಪಾಯಕಾರಿಯಾದ ಶಿಫಾರಸ್ಸುಗಳು ಇರುವುದು ಗೋಚರಿಸುತ್ತಿವೆ.

1 ರಿಂದ 8 ವಯಸ್ಸಿನ ಬುನಾದಿ ಹಂತದ ಶಿಕ್ಷಣಕ್ಕೆ ಕೇಂದ್ರೀಕೃತ ಎನ್‍ಸಿಆರ್‍ಟಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈ ಕ್ರಮವು ಕನ್ನಡದಂತಹ ಸಂಸ್ಕೃತಿಗಳ ವಿರುದ್ಧವಾಗಿದೆ. ಈಗಾಗಲೇ ಬಹುತೇಕ ಚರಿತ್ರೆಯ ಪುಸ್ತಕಗಳಲ್ಲಿ ಕನ್ನಡದ, ಕರ್ನಾಟಕದ ಸಂಸ್ಕೃತಿ, ಆಡಳಿತ, ವಾಣಿಜ್ಯ, ಸಮಾಜಗಳ ಚಿಂತನೆಗಳೇ ಇಲ್ಲವಾಗಿದೆ. ಎನ್.ಸಿ.ಆರ್.ಟಿ ಪಠ್ಯಕ್ರಮದ ಮೂಲಕ ಇನ್ನಷ್ಟು ಸಾಂಸ್ಕೃತಿಕ ದಮನ ಮಾಡಲು ಯೋಜಿಸಲಾಗುತ್ತಿದೆ. ನಮ್ಮ ಮಕ್ಕಳು, ಕನ್ನಡ, ತೆಲುಗು, ತಮಿಳು, ಮಲೆಯಳಂ, ಕೊಡವ, ಕೊಂಕಣಿ, ತುಳು, ಮರಾಠಿ, ಒರಿಯಾ, ಬಂಗಾಳಿ, ಗುಜರಾತಿ ಮುಂತಾದ ಸಂಸ್ಕೃತಿಗಳ ಮೂಲಕ ಕಲಿಯಬೇಕು ಮತ್ತು ಯೋಚಿಸಬೇಕು. ಅದಕ್ಕಾಗಿ ಆಯಾ ರಾಜ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಈ ನೆಲದ, ಮಣ್ಣಿನ ಸಂಗತಿಗಳನ್ನು ಪಾಠಗಳಲ್ಲಿ ಮಕ್ಕಳು ಕಲಿಯುವಂತಿರಬೇಕು. ಆದರೆ ಇದಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದ್ದಾರೆ.

ತ್ರ್ರಿ ಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿರುವುದು ಅದರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿರುವುದು ಭಾಷಾ ಹೇರಿಕೆ ಮಾತ್ರವಲ್ಲದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದಾಗಿದೆ. ಜತೆಗೆ ಸಂಸ್ಕೃತ ಭಾಷಾ ಕಲಿಕೆಗೆ ವಿಶೇಷ ಮಹತ್ವ ಕೊಡಬೇಕೆಂದು ಹೇಳಿರುವುದು, ಸಾಧ್ಯವಾದರೆ ಅದನ್ನು ಕಡ್ಡಾಯಗೊಳಿಸಬಹುದೆ ಎನ್ನುವಂತಹ ಮಾತುಗಳನ್ನೂ ಹೇಳಿರುವುದು ಅಸಾಂಗತ್ಯದ ಸೂಚನೆಯಾಗಿದೆ.

ಮತೀಯವಾದಿ ಭಾಷೆಯಲ್ಲಿ ಮಾತನಾಡುವ ಎನ್‍ಇಪಿ-2020, ಎನ್‍ಸಿಆರ್‍ಟಿಯನ್ನು ಪುನರ್ ರಚಿಸಬೇಕು, ಪಠ್ಯಗಳನ್ನು ಪುನರಾಯ್ಕೆ ಮಾಡಿಕೊಳ್ಳಬೇಕು ಎಂದು ಪದೇ ಪದೇ ಹೇಳಿದೆ.  ಹಾಗೆಯೆ ರಾಜ್ಯ ಸರ್ಕಾರ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ, ‘ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮದ ಸುಧಾರಣೆಗಾಗಿ ಟಾಸ್ಕ್‍ಫೋರ್ಸ್ ಉಪಸಮಿತಿ’ಯನ್ನು ರಚಿಸಿದೆ. ಈ ಸಮಿತಿಯಲ್ಲಿ ಇಂದುಪ್ರಕಾಶ್, ಮಾನಸ ನಾಗಭೂಷಣ್, ಪದ್ಮಾವತಿ ಸದಸ್ಯರಾಗಿದ್ದಾರೆ. ಈ ನಾಲ್ಕು ಜನ ಅಧ್ಯಕ್ಷರು ಮತ್ತು ಸದಸ್ಯರು ಏಕಪಕ್ಷೀಯವಾಗಿ ಕರ್ನಾಟಕದ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುವುದು ಸರಿಯೇ ? ಈ ಟಾಸ್ಕ್‍ಫೋರ್ಸ್ ಸಿಬಿಸಿಎಸ್ ಪಠ್ಯಕ್ರಮದ ಸ್ವರೂಪವನ್ನು ರಚಿಸಲು ಯಾರೊಂದಿಗೆ ಸಮಾಲೋಚನೆ ನಡೆಸಿದೆ? ಯಾವ ಮಾದರಿಗಳನ್ನು ಬಳಸಿದೆ ಎನ್ನುವ ವಿವರಗಳಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

ಎನ್‍ಇಪಿ-2020 ಕ್ಕೆ ಹಲವರು ತಮ್ಮ ಪ್ರತಿಕ್ರಿಯೆ ಮತ್ತು ತಕರಾರುಗಳನ್ನು ಕಳುಹಿಸಿದ್ದಾರೆ. ಸರ್ಕಾರ ಈ ಪ್ರತಿಕ್ರಿಯೆ ಮತ್ತು ತಕರಾರುಗಳನ್ನು ಸಾರ್ವಜನಿಕರ ಅವಗಾಹನೆಗೆ ಬಹಿರಂಗಗೊಳಿಸಿಲ್ಲ. ಈಗಾಗಲೇ ಪದವಿ ತರಗತಿಗಳಿಗೆ ಕನ್ನಡದಂತಹ ಭಾಷಾ ವಿಷಯಗಳನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಬಹುದಾಗಿದೆ ಎಂದು ಈ ತಿಮ್ಮೇಗೌಡರ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿತ್ತು. ವಿವಿಧ ವಲಯಗಳ ಗಣ್ಯರು ಪ್ರತಿಪಕ್ಷಗಳ ಮುಖಂಡರು ವಿರೋಧ ಮಾಡಿದ ಮೇಲೆ ಉನ್ನತ ಶೀಕ್ಷಣ ಸಚಿವರು ಎರಡು ವರ್ಷಗಳಿಗೆ ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ. ಪದವಿ ತರಗತಿಗಳನ್ನು 4 ವರ್ಷಗಳಿಗೆ ವಿಸ್ತರಿಸಿದರೆ 3 ವರ್ಷಗಳ ಕಾಲ ಕನ್ನಡ ವಿಷಯವನ್ನು ಮುಖ್ಯ ಪಠ್ಯಕ್ರಮವೆಂದು ಕಲಿಸಬೇಕು.

ಹೀಗಾಗಿ ಎನ್‍ಇಪಿ-2020 ಜಾರಿ ಮಾಡುತ್ತಿರುವ ರೀತಿ ಪಾರದರ್ಶಕವಾಗಿಲ್ಲ ಮತ್ತು ಪ್ರಜಾತಾಂತ್ರಿಕವಾಗಿಲ್ಲ. ಸಂವಿಧಾನದ ಆಶಯಗಳನ್ನು ಇಂಚಿಂಚಾಗಿ ಕೊಂದು ಹಾಕುತ್ತಿರುವ ಮತ್ತು ರಾಜ್ಯಗಳ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಬಲವಂತಕ್ಕೆ ರಾಜ್ಯ ಸರ್ಕಾರ ಸಂಚಿನ ರೂಪದಲ್ಲಿ ತರಾತುರಿಯಲ್ಲಿ ‘ಎನ್‍ಇಪಿ-2020’ ನ್ನು ಜಾರಿ ಮಾಡಬಾರದು ಎಂದು ಸಿದ್ಧರಾಮಯ್ಯ  ಆಗ್ರಹಿಸಿದ್ದಾರೆ.

ಹಾಗೆಯೇ ವಿಧಾನಸಭೆ-ವಿಧಾನ ಪರಿಷತ್‍ ನ ಅಧಿವೇಶನಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಮತ್ತು ಪ್ರಜ್ಞಾವಂತರು, ಪೋಷಕರ ವಲಯಗಳ ನಡುವೆ ಸಮಗ್ರ ಚರ್ಚೆಯ ನಂತರವಷ್ಟೇ ‘ಎನ್‍ಇಪಿ-2020’ ನ್ನು ಜಾರಿ ಮಾಡುವ ಕುರಿತು ಯೋಚಿಸಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

Key words: Opposition leader -Siddaramaiah – not – implement- national education policy

website developers in mysore