ಸಚಿವ ಡಿಕೆಶಿಗೆ ಆಪರೇಶನ್ ಕಮಲದ ತಿರುಗೇಟು: ಬಿಜೆಪಿ ಸೇರ್ಪಡೆಯಾದ ಕುಂದಗೋಳ ತಾಲೂಕು ಪಂಚಾಯತ್ ಸದಸ್ಯ

ಹುಬ್ಬಳ್ಳಿ:ಮೇ-12:(www.justkannada.in) ಕಾಂಗ್ರೆಸ್ ನಾಯಕರು ಯಾರೂ ಬಿಜೆಪಿಗೆ ಸೇರುತ್ತಿಲ್ಲ, ಯಾವ ಆಪರೇಷನ್ ಕಮಲವೂ ನಡೆಯಲ್ಲ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಕುಂದಗೋಳದ ಕೂಬಿಹಾಳ ತಾಲೂಕು ಪಂಚಾಯತ್ ಸದಸ್ಯ ಈಶ್ವರಪ್ಪ ಎಲಿವಾಳ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಎಲಿವಾಳ ಬಿಜೆಪಿಗೆ ಸೇರ್ಪಡೆಯಾದರು. ಇದೇ ವೇಳೆ ದ್ಯಾವನೂರು ಗ್ರಾಮ ಪಂಚಾಯತ್ ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಬಿ ಎಸ್ ವೈ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತನಾಡಿ, ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆ ಗೆದ್ದರೆ ನಾವೇ ಸರ್ಕಾರ ರಚನೆ ಮಾಡುತ್ತೇನೆ. 25 ಸಾವಿರ ಮತಗಳು ಅಂತರದಿಂದ ಎಸ್ ಐ ಚಿಕ್ಕನಗೌಡ್ರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರ ಮಗಿಸಿ ಚಿಂಚೋಳಿ ಕ್ಷೇತ್ರಕ್ಕೆ ತೆರಳಿದ ಯಡಿಯೂರಪ್ಪ, 16, 17 ರಂದು ಮತ್ತೇ ಬರುತ್ತೇನೆ. ಡಿ ಕೆ ಶಿವಕುಮಾರ್ ಅವರು ಎಷ್ಟೇ ಆಮಿಷ ಒಡ್ಡಿದರೂ ನಮ್ಮ ಪಕ್ಷದವರು ಯಾರು ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದರು. ಅಲ್ಲದೇ ಸಮ್ಮಿಶ್ರ ಸರ್ಕಾರವನ್ನು ನಾವು ಅಸ್ಥಿರಗೊಳಿಸುವುದಿಲ್ಲ ಅವರವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾವು ಹೊಣೆಯಲ್ಲ ಎಂದರು.

ಸಚಿವ ಡಿಕೆಶಿಗೆ ಆಪರೇಶನ್ ಕಮಲದ ತಿರುಗೇಟು: ಬಿಜೆಪಿ ಸೇರ್ಪಡೆಯಾದ ಕುಂದಗೋಳ ತಾಲೂಕು ಪಂಚಾಯತ್ ಸದಸ್ಯ

Operation kamala, kundgol taluk panchayat member, joins bjp