ಸುಮಲತಾ ಪರ ಪ್ರಚಾರ ಮಾಡಿಲ್ಲ: ಯಾರೇ ಗೆಲ್ಲಲಿ ಸೋಲಲಿ ಅದು ಮಂಡ್ಯ ಜನರ ತೀರ್ಪು- ಕೆಪಿಸಿಸಿ ಅಧ್ಯಕ್ಷರ ಭೇಟಿ ಬಳಿಕ ಚಲುವರಾಯಸ್ವಾಮಿ ಹೇಳಿಕೆ…

ಬೆಂಗಳೂರು,ಮೇ,3,2019(www.justkannada.in): ಡಿನ್ನರ್ ಗೆ ಹೋಗಿರೋದು ಚುನಾವಣೆ ಮುಗಿದ ನಂತರವೇ ಹೊರತು, ಚುನಾವಣೆಗೂ ಮೊದಲು ಅಲ್ಲ. ನಾವು ಸುಮಲತಾ ಪರ ಪ್ರಚಾರ ಮಾಡಿಲ್ಲ. ಯಾರೇ ಗೆಲ್ಲಲಿ ಸೋಲಲಿ ಅದು ಮಂಡ್ಯ ಜನರ ತೀರ್ಪು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ಪಕ್ಷೇತರ ಅಬ್ಯರ್ಥಿ ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಶಾಸಕ, ಕಾಂಗ್ರೆಸ್  ಮುಖಂಡ ಚಲುವರಾಯಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಢಿದರು.  ಸಚಿವ ಜಮೀರ್ ಅಹಮದ್ ಖಾನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಿನೇಶ್ ಗುಂಡೂರಾವ್ ಅವರ ಭೇಟಿ ಬಳಿಕ ಮಾತನಾಡಿದ ಚಲುವರಾಯಸ್ವಾಮಿ ಅವರು, ‘ಊಟದ ವಿಚಾರಕ್ಕೆ ಏಕೆ ಎಷ್ಟು ಮಹತ್ವ ಎಂದು ತಿಳಿದಿಲ್ಲ. ನಾವು ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ವಿಡಿಯೋ ರಿಲೀಸ್ ಬಗ್ಗೆ ಚರ್ಚೆ ನಡೆದಿದೆ. ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಿಲ್ಲ. ನಾನೊಬ್ಬನೇ ಪ್ರಚಾರ ಮಾಡಲು ಸಾಧ್ಯವಾ..? ಸುಮಲತಾ ಅವರನ್ನ ಗೆಲ್ಲಿಸಲು ಆಗುತ್ತಾ..? ಎಂದು ಪ್ರಶ್ನಿಸಿದರು.

‘ನಾವು ಚುನಾವಣೆ ಮುಗಿದ ಮೇಲೆ ಭೇಟಿ ಮಾಡಿದ್ದೇವೆ. ಹಿಂದಿನಿಂದಲೂ ನಾವು ಜೆಡಿಎಸ್‌ನಿಂದ ದೂರ ಉಳಿದಿದ್ದೇವೆ. ಅದನ್ನೂ ಪಕ್ಷದ ನಾಯಕರಿಗೆ ತಿಳಿಸಿದ್ದೇವೆ. ಅದು ಪಕ್ಷ ವಿರೋಧಿ ಚಟುವಟಿಕೆ ಹೇಗೆ ಆಗುತ್ತದೆ?’ ಅದು ಮಂಡ್ಯ ಜನರ ಮೇಲೆ ನಿಂತಿದೆ. ಡಿನ್ನರ್ ಗೆ ಹೋಗಿರೋದು ಚುನಾವಣೆ ಮುಗಿದ ನಂತರವೇ ಹೊರತು, ಚುನಾವಣೆಗೂ ಮೊದಲು ಅಲ್ಲ. ಮಂಡ್ಯ ಜನರ ತೀರ್ಮಾನ ಅಂತಿಮ. ನಾವು ಸಹ ಜನರ ತೀರ್ಮಾನದಿಂದಲೇ ಸೋತಿದ್ದೇವೆ.ಜೆಡಿಎಸ್ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದು ನಿಜ. ಆದರೇ ಯಾರು ಗೆಲ್ಲಬೇಕು ಅಂತಾ ಮಂಡ್ಯ ಜನರು ತೀರ್ಮಾನಿಸುತ್ತಾರೆ ಎಂದರು.

Key words: not – propagated –Sumalatha- Mandya -people’s- judgment-Chaluvarasaswamy