ಹಾಸನ ಜಿಲ್ಲೆಯಲ್ಲಿ ನವ ದಂಪತಿ ಜೀವ ಬಲಿ ಪಡೆದ ‘ಸೆಲ್ಫಿ’?!

ಹಾಸನ, ಮೇ 8, 2020 (www.justkannada.in): ಹೊರಗೆ ಸುತ್ತಾಡಲು ಹೊರಟ ನವದಂಪತಿ, ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.

ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಮೃತರು. ಎರಡು ತಿಂಗಳ ಹಿಂದಷ್ಟೆ ಇವರ ವಿವಾಹವಾಗಿತ್ತು. ನದಿಯ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋದಾಗ ಕಾಲು ಜಾರಿ ಬಿದ್ದು ದಂಪತಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ

 

ಹಿನ್ನೆಲೆ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರ್ಥೇಶ್, ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಗ್ರಾಮವಾದ ಬೇಲೂರು ತಾಲೂಕಿನ ಮುರಹಳ್ಳಿಗೆ ಬಂದಿದ್ದರು. ಬುಧವಾರ ಹೆನ್ನಲಿ ಗ್ರಾಮದಲ್ಲಿನ ಪತ್ನಿ ಕೃತಿಕಾ ಮನೆಗೆ ಬಂದಿದ್ದರು.

ಅಲ್ಲಿಂದ ಗುರುವಾರ ಸಂಜೆ ದಂಪತಿ ತಿರುಗಾಡಿಕೊಂಡು ಬರುತ್ತೇವೆಂದು ಬೈಕ್ನಲ್ಲಿ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರೂ ಇಬ್ಬರೂ ವಾಪಸ್ ಬರಲಿಲ್ಲ. ಬಳಿಕ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಪತ್ತೆಯಾಗಿದೆ. ಪರಿಶೀಲಿಸಿದಾಗ, ಮೀನುಗಾರರು ಹಾಕಿದ್ದ ಬಲೆಯಲ್ಲಿ ಕೃತಿಕಾ ಶವ ಸಿಕ್ಕಿಕೊಂಡಿದ್ದು ಬೆಳಕಿಗೆ ಬಂದಿದೆ. ನಂತರ ಅರ್ಥೇಶ್ ಮೃತದೇಹ ಕೂಡ ಸಿಕ್ಕಿದೆ.