ಯುಗಾದಿ ಹಬ್ಬದ ನಂತರ ಕರ್ನಾಟಕದಲ್ಲಿ ಹೊಸ ಕ್ಯಾಬಿನೆಟ್ ರಚನೆ ಸಾಧ್ಯತೆ..

ಬೆಂಗಳೂರು, ಮಾರ್ಚ್ 28, 2022 (www.justkannada.in): ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಯುಗಾದಿ ಹಬ್ಬದ ನಂತರ ರಾಜ್ಯ ಕ್ಯಾಬಿನೆಟ್ ಪುನರ್‌ ರಚನೆ ಮಾಡುವ ಎಲ್ಲಾ ಸಾಧ್ಯತೆಗಳು ಗೋಚರಿಸಿದ್ದು, ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಸೂಚನೆಗಳು ಗೋಚರಿಸಿವೆ.

ಮರುರಚನೆಯಾಗುವ ಕ್ಯಾಬಿನೆಟ್, ಅಸಮರ್ಪಕ ಪ್ರಾದೇಶಿಕ ಹಾಗೂ ಜಾತಿ ಪ್ರಾತಿನಿಧ್ಯಕ್ಕೆ ಸಂಬಂಧಪಟ್ಟಂತಹ ದೂರುಗಳಿಗೆ ಉತ್ತರ ನೀಡುವ ನಿರೀಕ್ಷೆಯದ್ದು, ಈ ಮೂಲಕ ಬಿಜೆಪಿಯು ಪ್ರಮುಖ ಮತದಾರರ ಒಲವನ್ನು ಗಳಿಸುವ ಹಾಗೂ ಮತಗಳನ್ನು ಖಾತ್ರಿಪಡಿಸಿಕೊಳ್ಳಲಿದೆ. ಈ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿಗಳ ಸಂತತಿ ಪುನಃ ಬರಲಿದೆ ಎನ್ನುತ್ತದೆ ಮೂಲಗಳು.

ಇದೇ ವರ್ಷ ಜನವರಿ ತಿಂಗಳಲ್ಲಿ ಸಂಕ್ರಾಂತಿಯ ನಂತರ ಕ್ಯಾಬಿನೆಟ್ ಪುನರ್‌ ರಚನೆಯಾಗಬಹುದು ಎಂದು ಊಹಿಸಲಾಗಿತ್ತು. ಆದರೆ ಬಿಜೆಪಿ ಹೈಕಮ್ಯಾಂಡ್ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು ಇದ್ದುದರಿಂದ ಕ್ಯಾಬಿನೆಟ್ ಪುನರ್‌ ರಚನೆಯ ಪ್ರಕ್ರಿಯೆಯನ್ನು ವಿಳಂಬ ಮಾಡಿತು. ಈಗ ಕೇಸರಿ ಪಕ್ಷ ಪಂಚರಾಜ್ಯಗಳ ಚುನಾವಣೆಗಳಲ್ಲಿ ಉತ್ತಮ ಗೆಲುವನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಏಪ್ರಿಲ್ ತಿಂಗಳ ಕೊನೆಯಲ್ಲಿ, ೨೦೨೩ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಸರಿಯಾಗಿ ಒಂದು ವರ್ಷಕ್ಕೆ ಮುಂಚೆ, ಹೊಸ ಕ್ಯಾಬಿನೆಟ್ ರಚಿಸಲಿದ್ದಾರೆ ಎನ್ನಲಾಗಿದೆ.

ಪುನರ್‌ ರಚಿತ ಸಂಪುಟದಲ್ಲಿ ಸ್ಥಾನ ಪಡೆಯಲು ಇರುವ ಹಲವು ಆಕಾಂಕ್ಷಿಗಳ ಪೈಕಿ ಬಿಜೆಪಿಯ ಹಿರಿಯ ನಾಯಕರಾದ ಎಂಎಲ್‌ಎ ಜಿ.ಹೆಚ್. ತಿಪ್ಪಾರೆಡ್ಡಿ ಅವರೂ ಇದ್ದು, ಈ ಸಂಬಂಧ ಮಾತನಾಡುತ್ತಾ, “ಪಕ್ಷದಲ್ಲಿ ಈಗಿರುವ ಸುಮಾರು ಏಳರಿಂದ ಎಂಟು ಸಚಿವರನ್ನು ಕೈಬಿಟ್ಟು ಅವರಿಗೆ ಪಕ್ಷದ ಕೆಲಸವನ್ನು ನೀಡಬಹುದು,” ಎನ್ನುವ ಮಾತುಗಳು ಕೇಳಿ ಬಂದಿವೆ ಎಂದಿದ್ದಾರೆ.

ತಿಪ್ಪಾರೆಡ್ಡಿ ಅವರು ಈಗಾಗಲೇ ಬಹಳ ಸಮಯದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅಂತಿಮವಾಗಿ ಮುಂದಿನ ಸಂಪುಟ ಪುನರ್‌ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನವನು ಅಲಂಕರಿಸಲಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ನಡೆಯುತ್ತಿವೆ. “ನನಗೆ ಸಚಿವ ಸ್ಥಾನ ಕೊಡುವುದು, ಬಿಡುವುದು ಪಕ್ಷಕ್ಕೆ ಸೇರಿದ ವಿಷಯ,” ಎಂದು ತಿಪ್ಪಾರೆಡ್ಡಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಂಪ್ರದಾಯಿಕವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿರುವ ಕೆಲವು ಸಮುದಾಯಗಳು ಈಗಾಗಲೇ ಪಕ್ಷದಲ್ಲಿ ವಿಶೇಷ ಸ್ಥಾನಮಾನಗಳನ್ನು ಅನುಭವಿಸುತ್ತಿದ್ದು, ಈ ಬಾರಿ ಪಕ್ಷ ಈ ಸಮುದಾಯಗಳಿಗೆ ಅಷ್ಟು ಪ್ರಾಮುಖ್ಯತೆ ನೀಡದಿರಬಹುದು ಎನ್ನಲಾಗಿದೆ. ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವ ಅವಕಾಶಗಳಿವೆ. ಸಂಪುಟದಿಂದ ಕೈಬಿಡಬಹುದಾದ ಸಂಭವವಿರುವವರ ಪಟ್ಟಿಯ ಪೈಕಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಹೆಸರುಗಳಿವೆ ಎನ್ನಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರನ್ನೂ ಒಳಗೊಂಡಂತೆ ಹಲವು ಹಿರಿಯ ಸಚಿವರನ್ನೂ ಸಹ ಸಚಿವ ಸ್ಥಾನವನ್ನು ತೊರೆಯುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಬಾರಿ ಪುನಃ ಮೂರು ಉಪಮುಖ್ಯಮಂತ್ರಿಗಳ ಸ್ಥಾನವನ್ನು ರಚಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ – ಒಕ್ಕಲಿಗ, ಎಸ್‌ಸಿ/ಎಸ್‌ಎಸ್‌ಟಿ ಹಾಗೂ ಒಬಿಸಿ ಸಮುದಾಯದವರಿಗೆ ಅವಕಾಶ ಕಲ್ಪಿಸಬಹುದು. ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಉಪಮುಖ್ಯಮಂತ್ರಿಯಾಗಲು ಬಹಳ ಧೀರ್ಘ ಕಾಲದಿಂದ ಆಕಾಂಕ್ಷೆಯನ್ನು ಹೊಂದಿದವರಾಗಿದ್ದು ಈ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ ಎನ್ನಲಾಗಿದೆ. ಸಂಪುಟ ಪುನರ್‌ ರಚನೆಯಲ್ಲಿ ಸ್ಥಾನಗಳಿಸುವ ಸಾಧ್ಯತೆಗಳಿರುವ ಹೊಸಬರ ಪೈಕಿ ಎಂಎಲ್‌ಎಗಳಾದ ಪಿ. ರಾಜೀವ್, ಬಸನಗೌಡ ಪಾಟೀಲ್ ಯತ್ನಾಳ್, ರಾಜೂಗೌಡ, ಎಂ.ಪಿ. ಕುಮಾರಸ್ವಾಮಿ ಮತ್ತು ಕೆ. ಪೂರ್ಣಿಮಾ ಅವರು ಹೆಸರುಗಳಿವೆ. ಸಂಪುಟದಿಂದ ಕೈಬಿಡುವ ಸಚಿವರ ಸಂಖ್ಯೆಯಲ್ಲಿ ಗೊಂದಲವಿದೆ ಎನ್ನಲಾಗಿದೆ.

“ಒಂದು ವೇಳೆ ಪಕ್ಷ ಐದು ಸಚಿವರನ್ನು ಸಂಪುಟದಿಂದ ಕೈಬಿಟ್ಟರೆ, ಈಗ ಮೂರು ಸ್ಥಾನಗಳು ಖಾಲಿ ಇದ್ದು, ಎಂಟು ಹೊಸ ಮುಖಗಳಿಗೆ ಅವಕಾಶ ಲಭಿಸುತ್ತದೆ. ಒಂದು ವೇಳೆ ಸಂಪುಟದಿಂದ ಕೈಬಿಡುವ ಸಚಿವರ ಸಂಖ್ಯೆ ೧೦ ಆದರೆ, ಈ ಸಂಖ್ಯೆ ೧೩ರವರೆಗೂ ಹೋಗಬಹುದು,” ಎನ್ನುವುದು ಪಕ್ಷದ ಕಾರ್ಯಕರ್ತರ ಆಂಬೋಣ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: new Cabinet -formation – Karnataka – Ugadi festival.