ಮೈಸೂರು ಯುವತಿಯ ಈ  “ಸ್ವರ್ಣ”  ನಡೆಗೊಂದು ಸಲಾಂ..!

ಮೈಸೂರು,ಡಿಸೆಂಬರ್,21,2021(www.justkannada.in):ಹೆಣ್ಣು ಮಕ್ಕಳಿಗೆ ಕೇಶರಾಶಿಯಿಂದಲೇ ಸೌಂದರ್ಯ ಇಮ್ಮಡಿಯಾಗುತ್ತೆ ಅನ್ನೋ. ನಂಬಿಕೆಯಿದೆ. ತಮ್ಮ ತಲೆಕೂದಲ ಬೆಳವಣಿಗೆಗೆ ಹರಸಾಹಸಪಡುವ ಎಷ್ಟೋ ಮಂದಿಯನ್ನ ನಾವು ನೋಡಿರ್ತೀವಿ. ಆದ್ರೆ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಉದ್ದನೆಯ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಸ್ವರ್ಣ ಎಂಬ ಮೈಸೂರಿನ ಯುವತಿ ಮಾನವೀಯತೆ ಮೆರೆದಿದ್ದಾಳೆ.

ಈಗಷ್ಟೆ ಸ್ನಾತಕೋತ್ತರ ಪದವಿ ಪೂರೈಸಿ ಯಶ್ಟೆಲ್ ವಾಹಿನಿಯಲ್ಲಿ ವೃತ್ತಿ ಆರಂಭಿಸಿರುವ ಸ್ವರ್ಣ ಸದಾ ನೊಂದವರ ಪರವಾಗಿ ನಿಲ್ಲಬೇಕು, ಕೈಲಾದ ಸಹಾಯ ಮಾಡಬೇಕು ಎಂಬ ಬಯಕೆ ಹೊಂದಿರುವ ಆದರ್ಶ ಯುವತಿ. ಕ್ಯಾನ್ಸರ್ ಪೀಡಿತರಿಗೆ ತನ್ನ ಕೇಶವನ್ನು ದಾನ ಮಾಡುತ್ತೇನೆ ಎಂದಾಗ ಆಕೆಯ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಕೂದಲಿನ ಆರೈಕೆ ಮಾಡಿದ್ದ ಸ್ವರ್ಣ, ಬೆಂಗಳೂರು ಹೇರ್ ಡೊನೇಷನ್ ಸೆಂಟರ್ ಎಂಬ ಎನ್ ಜಿ ಓ ಗೆ ತನ್ನ ಕೂದಲನ್ನು ದಾನ ಮಾಡಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿರುವ ಬೆಂಗಳೂರು ಹೇರ್ ಡೊನೇಷನ್ ಸಂಸ್ಥೆ ಕೂದಲನ್ನು ಸಂಗ್ರಹಿಸಿ ಅದರಿಂದ ವಿಗ್ ತಯಾರಿಸಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುತ್ತದೆ. ಕೂದಲನ್ನು ದಾನ ಮಾಡುವ ಮೂಲಕ ಕ್ಯಾನ್ಸರ್ ಪೀಡಿತರ ನೆರವಿಗೆ ನಿಂತಿರುವ ಸ್ವರ್ಣಳ ಆದರ್ಶ ಇತರರಿಗೆ ಮಾದರಿಯಾಗಿದೆ.

ಸಾಹಿತ್ಯ ಯಜಮಾನ್

ಹಿರಿಯ ಪತ್ರಕರ್ತರು, ಮೈಸೂರು

Key words: Mysore-girl- Donate –hair-cancer- patients