ಹೆಣ್ಣು ಮಕ್ಕಳ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸಲು ಪ್ರೋತ್ಸಾಹಿಸಿ- ಪೋಷಕರಿಗೆ ಪೂಜಾ ಅಗರ್ವಾಲ್ ಕಿವಿಮಾತು.

ಮೈಸೂರು,ಜನವರಿ,24,2023(www.justkannada.in): ಹೆಣ್ಣು ಮಕ್ಕಳ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸಲು ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಪೂಜಾ ಅಗರ್ವಾಲ್ ಕಿವಿಮಾತು ಹೇಳಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ರೈಲು ವಸ್ತುಸಂಗ್ರಹಾಲಯಕ್ಕೆ ಉಚಿತ ಪ್ರವೇಶ ಒದಗಿಸುವುದರ ಮೂಲಕ ಹೆಣ್ಣು ಮಕ್ಕಳು ಮತ್ತು ಅವರ ಜೊತೆಗಿರುವ ತಂದೆ,ತಾಯಿ, ಪೋಷಕರಿಗೆ ಆತಿಥ್ಯ ವಹಿಸಿತು.

ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ (SWRWWO) ನಿರ್ವಹಿಸುತ್ತಿರುವ ಲಲಿತಾ ಪ್ರೌಢಶಾಲೆಯ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಮೈಸೂರು ರೈಲು ವಸ್ತುಸಂಗ್ರಹಾಲಯದಲ್ಲಿ ಮೈಸೂರು ವಿಭಾಗದ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಪೂಜಾ ಅಗರ್ವಾಲ್ ರವರು ಮತ್ತು ಇತರ ಕಾರ್ಯಕಾರಿ ಸದಸ್ಯರು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜಾ ಅಗರ್ವಾಲ್  ಅವರು, ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು ಸಂಸ್ಥೆಯ ಬದ್ಧತೆ ಮತ್ತು ಆದ್ಯತೆಯನ್ನು ಪುನರುಚ್ಚರಿಸಿದರು.

ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಗುವಿನ ಘನತೆ ಮತ್ತು ಅವಕಾಶಗಳನ್ನು ಖಾತ್ರಿಪಡಿಸುವತ್ತ ಗಮನಹರಿಸಲಾಗುವುದು. ಶಿಕ್ಷಣದ ಅವಕಾಶವನ್ನು ಒದಗಿಸಲು ಮತ್ತು ಉತ್ತಮ ಆರೋಗ್ಯ ಸೇವೆ ಮತ್ತು ಲಿಂಗ ಸಂವೇದನೆಯನ್ನು ಸುಧಾರಿಸಲು ಸಂಸ್ಥೆಯು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸಲು ಪ್ರೋತ್ಸಾಹಿಸುವಂತೆ ಎಲ್ಲಾ ಪೋಷಕರನ್ನು ಒತ್ತಾಯಿಸಿದರು.

Key words: Mysore -Division – South –Western- Railway- National – Girl- Child- Day