ಪಾಲಿಕೆಗೆ ಬನ್ನಿ ಚರ್ಚೆ ಮಾಡುವ: ಸ್ವಪಕ್ಷೀಯ ಶಾಸಕರಿಗೆ ಸಂಸದ ಸವಾಲು.

ಮೈಸೂರು,ಜನವರಿ,29,2022(www.justkannada.in):  ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಸ್ವಪಕ್ಷದ ಶಾಸಕರೇ ಆದ ಎಲ್‌.ನಾಗೇಂದ್ರ, ಎಸ್.ಎ.ರಾಮದಾಸ್‌  ನಡುವಿನ ಟಾಕ್ ವಾರ್ ಮುಂದುವರೆದಿದೆ.

ಈ ಮಧ್ಯೆ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಸದ ಪ್ರತಾಪ್ ಸಿಂಹ ಯೋಜನೆ ಉದ್ದೇಶ ಹಾಗೂ ಪ್ರಯೋಜನದ ಬಗ್ಗೆ ಮಾಹಿತಿ ನೀಡಿ ತಮ್ಮದೇ ಪಕ್ಷದ ಶಾಸಕರಿಗೆ ಸವಾಲು ಹಾಕಿದರು.

ಗ್ಯಾಸ್ ಪೈಪ್ ಲೈನ್ ಅತ್ಯಂತ ಮಹತ್ವದ್ದು. ಸಿಲಿಂಡರ್ ಬೆಲೆ 904 ರೂಪಾಯಿ ಇದೆ. ಗ್ಯಾಸ್ ಸಿಲಿಂಡರ್ ಅನ್ನು ಮನೆಗೆ ಸಾಗಿಸಲು ಪ್ರತ್ಯೇಕ ಬೆಲೆ ಇರುತ್ತದೆ. ಗ್ಯಾಸ್ ಸ್ಪೋಟದ ಪ್ರಕರಣಗಳು ಹಾಗಾಗ ನಡೆಯುತ್ತಿರುತ್ತದೆ. ಇದನ್ನು ತಪ್ಪಿಸಲು ಮನೆ ಮನೆಗೆ ನಲ್ಲಿಯಲ್ಲಿ ನೀರು ಬಂದಂತೆ ಗ್ಯಾಸ್ ಕೂಡ ಮನೆಗೆ ಬರಬೇಕು. ಮೋದಿ ಅವರು ಗುಜರಾತ್ ನಲ್ಲಿ ಇದನ್ನು ಮೊದಲು ಆರಂಭಿಸಿದ್ದರು. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ ಧಾರಾವಾಡ, ಚಿತ್ರದುರ್ಗ, ಕಲಬುರ್ಗಿ ಹೀಗೆ ಹಲವು ಜಿಲ್ಲೆಗಳಲ್ಲಿ ಇದನ್ನು ಜಾರಿ ಮಾಡಲು ತಿಳಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಶಾಸಕ ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗಿಂತ ಸೀನಿಯರ್ ಲೀಡರ್. ಮೋದಿ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲೇ ಇವರು ಜನಪ್ರತಿನಿಧಿಗಳಾಗಿದ್ದವರು. ಶಾಸಕ ಎಲ್ ನಾಗೇಂದ್ರ ಕೂಡ ಪಾಲಿಕೆ ಸದಸ್ಯರಾಗಿದ್ದವರು. ಪಾಲಿಕೆ ಕೌನ್ಸಿಲ್ ಸಭೆಗೆ ಭಾಗಿಯಾಗದೇ ನಮ್ಮ ಪಕ್ಷದ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಅಗೌರವ ತೋರಲಾಗಿದೆ. ನಮ್ಮ ಪಕ್ಷದ ಮೇಯರ್ ಗೆ ಅಗೌರವ ತೋರಿದ್ದು ಸರಿಯಾದ ನಿಲುವೇ? ಚರ್ಚೆಗ ಬನ್ನಿ.  ಕೋರಂ ಅಭಾವ ಉಂಟು ಮಾಡೋದು. ಇದೆಲ್ಲ ಬೇಡ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.

ಗ್ಯಾಸ್ ಪೈಪ್ ಅಳವಡಿಸುವವರೇ ರಸ್ತೆ ಸರಿ ಮಾಡಿ ಕೊಡುತ್ತಾರೆ. ಗ್ಯಾಸ್ ಪೈಪ್ ಲೈನ್ ಗೆ ಬಳಸಿದ ಜಾಗಕ್ಕೆ ಅನುಗುಣವಾಗಿ ಪಾಲಿಕೆಗೆ ಹಣ ಕೊಡುತ್ತೇವೆ. ಲೈನ್ ಹಾಕಲು ತೆಗೆದ ಹಳ್ಳವನ್ನು 24 ಗಂಟೆಯೊಳಗೆ ಮುಚ್ಚಬೇಕು. ಖಾಸಗಿ ಮೊಬೈಲ್ ಕಂಪನಿಗಳು ರಸ್ತೆ ಅಗೆದಾಗ ಈಗ ಮಾತಾಡುತ್ತಿರುವವರು ಯಾಕೆ ಸುಮ್ಮನೆ ಇದ್ದರು. ಖಾಸಗಿ ಕಂಪನಿಯ ಕೇಬಲ್ ಅಳವಡಿಕೆಯಾಗಿದೆ‌. ಆಗ ಯಾರು ಏಕೆ ಇದನ್ನು ಕೇಳಲಿಲ್ಲ. ಆಗಲೂ ರಸ್ತೆ ಅಗೆದು ಕೆಲಸ ಮಾಡಿದ್ದಾರೆ. ನಿಮ್ಮ ಜೊತೆ ವೈಯಕ್ತಿಕವಾಗಿ ಮಾತನಾಡಿ ಹೋಗಿದ್ದಾರಾ ? ಎಂದು ಇಬ್ಬರು ಬಿಜೆಪಿ ಶಾಸಕರ ವಿರುದ್ಧ ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದರು.

ಪಾಲಿಕೆಗೆ ಬನ್ನಿ ಅಲ್ಲೇ ಚರ್ಚೆ ಮಾಡೋಣ

ನಾಗೇಂದ್ರ ವಿಧಾನಸೌಧಕ್ಕೆ ಹೋಗಿದ್ದು ಪಾಲಿಕೆಯಿಂದ. ಪಾಲಿಕೆ ಬಗ್ಗೆ ಏಕೆ ನಿರ್ಲಕ್ಷ್ಯ. ಪಾಲಿಕೆಗೆ ಬನ್ನಿ ಅಲ್ಲೇ ಚರ್ಚೆ ಮಾಡೋಣ ಎಂದು  ಶಾಸಕರಾದ ನಾಗೇಂದ್ರ ಎಸ್ ಎ ರಾಮದಾಸ್‌ಗೆ ಸವಾಲು ಹಾಕಿದ ಸಂಸದ ಪ್ರತಾಪ್ ಸಿಂಹ,  ನೀವು ಬಂದ  ಮೂಲ ಏಕೆ‌ ಮರೆಯುತ್ತೀರಾ ? ಪಾಲಿಕೆ ಕೌನ್ಸಿಲ್‌ ಗೆ ಬನ್ನಿ. ಅಲ್ಲೇ ಕುಳಿತು ಚರ್ಚೆ ಮಾಡೋಣ. ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ಯಾವುದೇ ತಕರಾರು ಇಲ್ಲ. ಅವರ ಆಶೀರ್ವಾದ ಇದೆ ಎಂದು ಭಾವಿಸಿದ್ದೇನೆ. ಇವರು ರಸ್ತೆಯ ನೆಪ ನೀಡುತ್ತಿದ್ದಾರೆ ಅಷ್ಟೇ. ದಾರಿ ತಪ್ಪಿಸುವುದು ಏನೇನೋ ಮಾತನಾಡುವುದು ಬೇಡ. ಪಾಲಿಕೆ ಚರ್ಚೆಗೆ ಬಂದಿದ್ದರೆ ಎಲ್ಲಾ ಮಾಹಿತಿ ನೀಡುತ್ತಿದ್ದೆ. ನಾನು ಸಂಸದನಾಗಿ ಪಾಲಿಕೆ ಕೌನ್ಸಿಲ್‌ ಗೆ ಹೋಗುತ್ತೇನೆ. ನೀವು ಏಕೆ ಬರುವುದಿಲ್ಲ ? ಮುಂದಿನ ಕೌನ್ಸಿಲ್‌ಗೆ ಬನ್ನಿ. ಅಲ್ಲೇ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಶಾಸಕ ನಾಗೇಂದ್ರಗೆ ಆಹ್ವಾನ ನೀಡಿದರು.

ಸುಮ್ಮನೆ ಮಾತನಾಡಿದರೆ ಉಗುಳು ಇರುತ್ತದೆ ವಿಷಯ ಇರುವುದಿಲ್ಲ ನರೇಂದ್ರ ಮೋದಿಗಿಂತ ನಾಗೇಂದ್ರ ,ಎಸ್ ಎ ರಾಮದಾಸ್ ಅನುಭವಿಗಳು. ಇಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆಯಿರಿ. ಈ ಯೋಜನೆ ಸರಿಯಿಲ್ಲ ನಾವು ನಿಮಗಿಂತ ಹಿರಿಯರು ಅಂತಾ ಹೇಳಿ. ಯೋಜನೆಯನ್ನು ರದ್ದು ಮಾಡುವಂತೆ ಪತ್ರ ಬರೆಯಿರಿ. ನಿಮ್ಮನ್ನೆ ಜ್ಞಾನಿಗಳು ಅಂದುಕೊಳ್ಳುತ್ತೇನೆ ಎಂದು ಟಾಂಗ್ ನೀಡಿದರು.

ಪ್ರತಾಪ್ ಸಿಂಹಗೆ ನಾವೂ ಓಟ್ ಕೊಡಿಸಿದ್ದೇವೆ ಎಂಬ ಶಾಸಕ ನಾಗೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ರಾಜಕಾರಣಕ್ಕೆ ಯಾರು ಬೇಕಾದರೂ ಬರಬಹುದು. ರಿಯಲ್ ಎಸ್ಟೇಟ್ ಮಾಡುವವರು, ಬಡ್ಡಿ ವ್ಯವಹಾರ ಮಾಡುವವರು ಯಾರು ಬೇಕಾದರೂ ರಾಜಕೀಯಕ್ಕೆ ಬರಬಹುದು. ಬಂದ ಮೇಲೆ ಹೇಗೆ ಕೆಲಸ ಮಾಡುತ್ತಾರೆ. ಎನ್ನುವುದರ ಮೇಲೆ ಜನ ತೀರ್ಮಾನ ಮಾಡುತ್ತಾರೆ. ನನ್ನ ಗೆಲವಿಗೆ ಕಾರ್ಯಕರ್ತರು ಶ್ರಮಿಸಿದ್ದಾರೆ. ಪಾಲಿಕೆ ಮಾಜಿ ಹಾಲಿ ಸದಸ್ಯರು ಶ್ರಮಿಸಿದ್ದಾರೆ. ಮೋದಿ ಅವರ ಅಭಿಮಾನಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಅವರು ಸಹ ನನಗೆ ಮತ ಹಾಕಿದ್ದಾರೆ.

ನಾಗೇಂದ್ರ ಅವರು ಹುಟ್ಟಿ ಬೆಳೆದ ಕೆಜಿ ಕೊಪ್ಪಲಿನಲ್ಲೆ ಅವರ ಚುನಾವಣೆಯಲ್ಲಿ ಲೀಡ್ ಬರಲಿಲ್ಲ.  ಇದು ನೆನಪಿರಲಿ ಅವರ ಮನೆಯ ಪಾಲಿಕೆ ಸದಸ್ಯರೆ ಬೇರೆ ಪಕ್ಷದವರಾಗಿದ್ದಾರೆ. ನಾಗೇಂದ್ರ ಅವರು ಎದುರು ಸೋತ ಕಾಂಗ್ರೆಸ್ ವಾಸು ಅವರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರು ಯಾವತ್ತೂ ಅಹಂ ಪ್ರದರ್ಶಿಸಲಿಲ್ಲ. ನಿಮಗೆ ನೀವೇ ಅಭಿವೃದ್ಧಿ ಹರಿಕಾರ ಎಂದು ಕೊಳ್ಳಬೇಡಿ. ಚಾಮರಾಜ ಕ್ಷೇತ್ರದಲ್ಲಿ ನಾನು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅಭಿವೃದ್ಧಿ ಬಗ್ಗೆ ನನಗೆ ಪಾಠ ಹೇಳಬೇಡಿ. ಗೋವಾಕ್ಕೆ ಕೆಲವರು ಪಾರ್ಟಿ ಮಾಡಲು ತಮ್ಮ ಕಾರ್ಯಕರ್ತರನ್ನು ಕರೆದು ಕೊಂಡು ಹೋಗಿದ್ದರು.  ಆ ವಿಮಾನ ತರಿಸಿದ್ದೆ ನಾನು ಅತಿ ಹೆಚ್ಚು ಮತಗಳಿಂದ ನಾನು ಗೆದ್ದಿದ್ದೇನೆ. ನಾನು ಕೆಲಸ ಮಾಡಿದ್ದಕ್ಕೆ ನನಗೆ ಜನ ಮತ ಹಾಕಿದ್ದಾರೆ ಎಂದು ಹರಿಹಾಯ್ದರು.

Key words: MP-Prathap simha-BJP-MLAs-Ramadas-L.Nagendra

ENGLISH SUMMARY…

Come to MCC, let us debate: MP challenges own part MLAs
Mysuru, January 29, 2022 (www.justkannada.in): A war of words is taking place between ruling party MP Pratap Simha and MLAs L. Nagendra and S.A. Ramadas, over the supply of LPG through a pipeline to all houses in Mysuru city.
Mysuru-Kodagu MP Pratap Simha held a press meet in Mysuru to explain the purpose of the project and its uses and challenged his party MLAs.
“The LPG pipeline is a very important project. The price of each LPG cylinder is Rs.904. It also costs extra money to supply it to every house. We are also seeing several incidents of explosions of LPG cylinders in the state. Hence, LPG should also be supplied like water through a pipeline to every house to avoid such accidents. Narendra Modi launched this project for the first time in the country in Gujarath. Instructions have been given to implement this project in Bengaluru, Mysuru, Ramanagara, Mandya, Tumakuru, Hassan, Shivamogga, Hubballi, Dharwad, Chitradurga, Kalaburagi, and other districts in the State,” he informed.
Keywords: MP Pratap Simha/ LPG supply/ pipeline/ debate