ಸಂಸದ ಪ್ರತಾಪ್ ಸಿಂಹ ಒಬ್ಬ ಪುಂಗಿದಾಸ: ಇವರಿಂದ ಬಿಜೆಪಿ ಪಕ್ಷದ ವರಿಷ್ಠರಿಗೆ ಅವಮಾನ- ಸಿ.ಎನ್ ಮಂಜೇಗೌಡ ವಾಗ್ದಾಳಿ.

ಮೈಸೂರು,ನವೆಂಬರ್,17,2022(www.justkannada.in): ಮೈಸೂರಿನಲ್ಲಿ  ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಗಂಭೀರ ಸ್ವರೂಪದ ಪಡೆಯಲು ಕಾರಣರಾದ ಸಂಸದ ಪ್ರತಾಪ್ ಸಿಂಹ ವಿರುದ್ಧ  ವಿಧಾನ ಪರಿಷತ್ ಸದಸ್ಯ ಹಾಗು ಮುಡಾ ಸದಸ್ಯ ಸಿ.ಎನ್ ಮಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ ಸಂಸದ ಪ್ರತಾಪ್ ಸಿಂಹ  ವಿರುದ್ಧ ಕಿಡಿ ಕಾರಿದ ಎಂಎಲ್ ಸಿ ಮಂಜೇಗೌಡ,  ಸಂಸದ ಪ್ರತಾಪ್ ಸಿಂಹ ಒಬ್ಬ ಪುಂಗಿದಾಸ. ಇವರಿಂದ ಬಿಜೆಪಿ ಪಕ್ಷದ ವರಿಷ್ಠರಗೆ ಅವಮಾನವಾಗುತ್ತಿದೆ. ಬಾಯಿಗೆ ಬಂದಾ ಹಾಗೆ ಮಾತನಾಡುತ್ತಾನೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂಥ ವಿಚಾರಗಳನ್ನು ತೆಗೆದುಕೊಂಡು ಶಾಂತಿ ಕದಡುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಗುತ್ತಿಗೆಯನ್ನು ನಗರಾಭಿವೃದ್ಧಿ ಸಚಿವರ ಸಂಬಂಧಿಕರಿಗೆ ನೀಡಲಾಗಿದೆ. ಪರಿಣಾಮ ಮುಡಾ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಸಿ.ಎನ್ ಮಂಜೇಗೌಡ ಗಂಭೀರ ಆರೋಪ ಮಾಡಿದರು.

ಮುಡಾದ ಕಾಮಗಾರಿಗಳನ್ನು ಸಚಿವರು ಹಾಗು ಮೇಲ್ಮಟ್ಟದ ಅಧಿಕಾರಿಗಳ ಆಪ್ತರು ಮತ್ತು ಸಂಬಂಧಿಕರಿಗೆ ನೀಡಲಾಗಿದೆ. ಪರಿಣಾಮ ಮುಡಾ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಮುಡಾ ಸಭೆ ನಡೆದು ಐದು ತಿಂಗಳಾಯಿತು. ಮುಡಾದ ಅಧಿಕಾರಿಗಳು ‌‌ನಿವೇಶನಗಳನ್ನು ನಿರಂತರವಾಗಿ ಹರಾಜು ಹಾಕುವ ಮೂಲಕ ಮುಡಾವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಹರಾಜಿನಿಂದ ಬರುವ ಕೋಟ್ಯಾಂತರ ಹಣವನ್ನು ಈಗಾಗಲೇ ಅಭಿವೃದ್ಧಿಪಡಿಸಿ ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಿರುವ ಬಡಾವಣೆಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಮುಡಾದ ಆಸ್ತಿ ಕರಗುವುದರ ಜೊತೆಗೆ ಮುಡಾ ಆರ್ಥಿಕವಾಗಿಯೂ ದಿವಾಳಿಯತ್ತ ಸಾಗಿದೆ ಎಂದು  ಸಿ ಎನ್ ಮಂಜೇಗೌಡ ಹೇಳಿದರು.

Key words: MP Pratap Sinha – Pungidasa-mysore-MLC-C.N Manjegowda