ಸಿಎಂ ಬೊಮ್ಮಾಯಿ ಭೇಟಿ ಮಾಡಿ ಅನುದಾನ ಬಿಡುಗಡೆಗೆ ಮನವಿ ಮಾಡಿದ ಶಾಸಕ ಜಿ.ಟಿ ದೇವೇಗೌಡರು

ಬೆಂಗಳೂರು,ಮೇ,29,2022(www.justkannada.in) ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡರು ಇಂದು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿ ಅನುದಾನದ ಬಿಡುಗಡೆಗೆ ಮನವಿ ಮಾಡಿದರು.

ಕಳೆದ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ನನ್ನ ಮತ ಕ್ಷೇತ್ರ ವ್ಯಾಪ್ತಿಯ ಜನವಸತಿ ಪ್ರದೇಶಗಳಾದ ಬೋಗಾದಿ 2ನೇ ಹಂತ, ಸಿ.ಎಫ್. ಟಿ. ಆರ್. ಐ ಬಡಾವಣೆ, ಆನಂದನಗರ ಆಶ್ರಯ ಬಡಾವಣೆ, ಆನಂದ ಬಡಾವಣೆ, ಪ್ರೀತಿ ಬಡಾವಣೆ, ರಾಮಕೃಷ್ಣನಗರ ದಟ್ಟಗಳ್ಳಿ ಶಾರದಾದೇವಿ ನಗರ ಹಾಗೂ ಇನ್ನಿತರ ಜನವಸತಿ ಪ್ರದೇಶಗಳು ಜಲಾವೃತಗೊಂಡು ಗೃಹಪಯೋಗಿ ವಸ್ತುಗಳು ಹಾಗೂ ದವಸ ಧಾನ್ಯಗಳು ನೀರುಪಾಲಾಗಿ ಅಪಾರ ಪ್ರಮಾಣದ ನಷ್ಟವಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 138 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆದರೆ ಈ ವರ್ಷ ಮೇ ತಿಂಗಳಿನಲ್ಲಿ ಮತ್ತೆ ಸುರಿದ ಮಳೆಯಿಂದಾಗಿ ಹಿನಕಲ್ ಕೆರೆ, ಬೋಗಾದಿ ಕೆರೆ ಹಾಗೂ ಲಿಂಗಾಬುದಿ ಕೆರೆಗಳು ಸುಮಾರು 20 ವರ್ಷಗಳ ನಂತರ ಕೊಡಿ ಹೊಡೆದ ಪರಿಣಾಮ ಜನವಸತಿ ಪ್ರದೇಶಗಳು ಮತ್ತೊಮ್ಮೆ ಜಲಾವೃತಗೊಂಡು ಸಾರ್ವಜನಿಕರು ತಿರುಗಾಡುವ ಸೇತುವೆಗಳು, ರಸ್ತೆಗಳು, ಚರಂಡಿಗಳು ತೀವ್ರವಾಗಿ ಹಾಳಾಗಿದ್ದು ಸಂಸದರು, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಇನ್ನು ಮುಂಬರುವ ದಿನಗಳಲ್ಲಿ ಪುನರಾವರ್ತನೆಯಾಗದಂತೆ ತಡೆಯಲು ಪಾಲಿಕೆ ಆಯುಕ್ತರು ಈ ಸಂಬಂಧ ವಿವರವಾದ ಮಾಹಿತಿಗಳೊಂದಿಗೆ ಕಾಮಗಾರಿಗಳಿಗೆ ರೂ 27.50 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸದರಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದ್ದು ಅನುದಾನವನ್ನು ಬಿಡುಗಡೆ ಮಾಡಿಕೊಟ್ಟು ಈ ಭಾಗದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಸಹಾಯ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಜಿ ಟಿ ದೇವೇಗೌಡರು ತಿಳಿಸಿದರು.