ಮುಂದೆಯೂ ಹೆಚ್,ವಿಶ್ವನಾಥ್ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷರು: ಮಾಜಿ ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಸಚಿವ ಜಿ.ಟಿ ದೇವೇಗೌಡರು..

ಮೈಸೂರು,ಜೂ,5,2019(www.justkannada.in): ಮುಂದೆಯೂ ಹೆಚ್. ವಿಶ್ವನಾಥ್ ಅವರೇ  ಜೆಡಿಎಸ್ ನ  ರಾಜ್ಯಾಧ್ಯಕ್ಷ ಆಗ್ತಾರೆ ಎಂದು ಸಚಿವ ಜಿ.ಟಿ ದೇವೇಗೌಡರು ತಿಳಿಸಿದ್ದಾರೆ.

ಮೈಸೂರಿನಲ್ಲಿ ವನ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ, ನಿನ್ನೆ ಜೆಡಿಎಸ್ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ನಾಯಕರು ಚರ್ಚೆ ಮಾಡಿದ್ದೇವೆ. ಮುಂದೆಯೂ ಹೆಚ್. ವಿಶ್ವನಾಥ್ ಅವ್ರೇ ಜೆಡಿಎಸ್ ನ ರಾಜ್ಯಾಧ್ಯಕ್ಷ ಆಗ್ತಾರೆ. ನಾಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನ ವಿಶ್ವನಾಥ್ ಭೇಟಿ ಮಾಡಲಿದ್ದಾರೆ. ಈಗಾಗಲೇ ವಿಶ್ವನಾಥ್  ರಾಷ್ಟ್ರೀಯ ಅಧ್ಯಕ್ಷರ ಮಾತಿಗೆ ಬದ್ಧರಾಗಿರ್ತೀನಿ ಅಂತ ಹೇಳಿದ್ದಾರೆ ಎಂದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಗುಣಗಾನ ಮಾಡಿದ ಸಚಿವ ಜಿ.ಟಿ ದೇವೇಗೌಡ, ಸಿದ್ದರಾಮಯ್ಯ ನನ್ನ ಟಾರ್ಗೆಟ್ ಅಲ್ಲ. ನಾನು ಸಿದ್ದರಾಮಯ್ಯರ ಟಾರ್ಗೆಟ್ ಅಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರೇ ನಾಯಕರು. ಅವರು ಕಳೆದ ಬಾರಿ ರಾಜ್ಯದಲ್ಲಿ 5 ವರ್ಷಗಳ ಕಾಲ ಉತ್ತಮವಾದ ಆಡಳಿತ ನಡೆಸಿದ್ದಾರೆ. ರಾಷ್ಟ್ರದ ನಾಯಕರು ಹಾಗೂ ಜನತೆ ಸಿದ್ದರಾಮಯ್ಯರನ್ನ ಒಪ್ಪಿಕೊಂಡಿದ್ದಾರೆ ಎಂದು ಹಾಡಿ ಹೊಗಳಿದರು.

ಮೈಸೂರಿನಲ್ಲಿ ಕಾಂಗ್ರೆಸ್  ಸೋಲಾಗಲು ವಿಶ್ವನಾಥ್ ಕಾರಣ ಎಂದಿದ್ದ ಶಾಸಕ ತನ್ವೀರ್ ಸೇಠ್ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಸಚಿವ ಜಿ.ಟಿ ದೇವೇಗೌಡ, ಎರಡು ಪಕ್ಷದಿಂದಲೂ ತಪ್ಪಾಗಿದೆ ನಿಜ.ಎಡವಿ ಬಿದ್ದ ಮೇಲೆ ತಿಳಿಯೋದು ಎಲ್ಲಿ ತಪ್ಪಾಗಿದೆ ಅಂತಾ. ಅದನ್ನ ಮುಂದೆ ಸರಿಪಡಿಸಿಕೊಂಡು ಹೋಗುತ್ತೇವೆ. ತನ್ವೀರ್ ಸೇಠ್ ಹೇಳಿಕೆ ವಿಷಯ ಸಂಬಂಧಿಸಿ ಮಾತನಾಡುವ ಸಮಯ ಇದಲ್ಲ. ಸಮಯ ಮೀರಿದೆ. ಮತ್ತೆ ಎಡವದೇ ಜಾಗೃತರಾಗಿ ಮುನ್ನಡೆಯಬೇಕಿದೆ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರವನ್ನ ಜನರ ಬಳಿ ತೆಗೆದುಕೊಂಡು ಹೋಗುವುದು ನಮ್ಮ ಗುರಿ. ಗ್ರಾಮ ವಾಸ್ತವ್ಯದ ಮೂಲಕ ರಾಜ್ಯದ ಅಭಿವೃದ್ಧಿಗೆ ಮುಂದಾಗುತ್ತೇವೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ಕರ್ನಾಟಕದಿಂದಲೇ ಉದಯವಾಗುತ್ತವೆ. ನಮ್ಮ ಆಡಳಿತವನ್ನ ಜನ ಮೆಚ್ಚಿಧ್ದಾರೆ ಎಂದು ಜಿಟಿಡಿ ವಿಶ್ವಾಸ ವ್ಯಕ್ತಪಡಿಸಿದರು.

Key words: minister GT Deve Gowda praised Former CM Siddaramaiah

#mysore #GTDeveGowda #praised #Siddaramaiah  #hvishwanath