ಲೈಟರ್ ವಿಚಾರಕ್ಕೆ ಕಿರಿಕ್ : ಪುಂಡರಿಂದ ಅಂಗಡಿಗೆ ನುಗ್ಗಿ ಗಲಾಟೆ, ದಂಪತಿ ಮೇಲೆ ಹಲ್ಲೆ.

ಮೈಸೂರು,ಜೂನ್,14,2022(www.justkannada.in): ಲೈಟರ್ ವಿಚಾರಕ್ಕೆ ಅಂಗಡಿಗೆ ನುಗ್ಗಿ ಪುಂಡರು ಗಲಾಟೆ ಮಾಡಿ ದಂಪತಿಯ ಮೇಲೆ ಹಲ್ಲೆಗೈದಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ನಡೆದಿದೆ.

ಟಿ.ನರಸೀಪುರದ ತಿಬ್ಬಾದೇವಿ ಕಾಫಿ ಶಾಪ್ ನಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಮತ್ತು ಶೋಭಾ ಹಲ್ಲೆಗೊಳಗಾದ ದಂಪತಿ. ರಮೇಶ್ ದಂಪತಿ. ಟೀ ಹಾಗೂ ಜ್ಯೂಸ್ ಅಂಗಡಿ ನಡೆಸುತ್ತಿದ್ದು ಈ ಮಧ್ಯೆ  ಎರಡು ದಿನದ ಹಿಂದೆ ರಾತ್ರಿ ಲೈಟರ್ ತೆಗೆದುಕೊಳ್ಳಲು ಇಬ್ಬರು ಯುವಕರು ಬಂದಿದ್ದರು. ಲೈಟರ್ ತೆಗೆದುಕೊಳ್ಳುವ ವೇಳೆ ಗಲಾಟೆ ನಡೆದಿದೆ.

ಲೈಟರ್ ಗೆ 20 ರೂಪಾಯಿ ಏಕೆ ಅಂತಾ ಯುವಕರು ಪ್ರಶ್ನಿಸಿ ಗಲಾಟೆ ಮಾಡಿದ್ದು, ನಿಮ್ಮ ಅಂಗಡಿಯಲ್ಲಿ ಲೈಟರ್ ರೇಟ್ ಜಾಸ್ತಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವೇಳೆ ರಮೇಶ್ ಬೇಕಾದರೆ ತೆಗೆದುಕೊಳ್ಳಿ ಇಲ್ಲ ಬೇರೆ ಅಂಗಡಿಗೆ ಹೋಗಿ ಎಂದಿದ್ದಾರೆ. ಇದರಿಂದ ಆಕ್ರೊಶಗೊಂಡ ಯುವಕರು, ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಯುವಕರಿಗೆ ಹೊಡೆದು ಪತ್ನಿ ಶೋಭಾ ಓಡಿಸಿದ್ದಾರೆ. ಈ ಸಮಯದಲ್ಲಿ ಮಹಿಳೆಯ ಕೂದಲು ಹಿಡಿದು ಪುಂಡರು ಎಳೆದಾಡಿದ್ದು, ಮಹಿಳೆಯ ಗಂಡನ ಬಟ್ಟೆ ಬಿಚ್ಚಿ  ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಬೆಳಗ್ಗೆ ಮತ್ತೆ ಕೆಲವರ ಜೊತೆ ಕಬ್ಬಿಣದ ರಾಡ್ ಹಿಡಿದು ಬಂದು ದಾಂಧಲೆ ನಡೆಸಿದ್ದುಅಂಗಡಿಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಏಕಾಏಕಿ ರಮೇಶ್ ರನ್ನು ಅಂಗಡಿಯಿಂದ ಹೊರಗೆ ಎತ್ತುಕೊಂಡು ಹೋಗಿ ಪುಂಡರು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ರಮೇಶ್ ಹಾಗೂ ಶೋಭಾ ತಲೆಗೆ ಗಾಯಗಳಾಗಿವೆ. ಗಲಾಟೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯುವಕರ ಗುಂಪಿನ ವಿರುದ್ಧ ಟಿ.ನರಸೀಪುರ ಪೊಲೀಸ್ ಠಾಣೆಗೆ ದಂಪತಿ ದೂರು ನೀಡಿದ್ದು,  ಯುವಕರು ಯಾರು ಅನ್ನೋ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸದ್ಯ ಸಿಸಿ ಕ್ಯಾಮರಾದಲ್ಲಿ ಇದ್ದ ಐವರ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.

Key words: lighter-issue- shop -assaulting – couple-mysore