ಪಕ್ಷಕ್ಕೆ ಶಕ್ತಿ ತುಂಬಲು ಹರಿಪ್ರಸಾದ್ ಹಾಗೂ ನಾಸೀರ್ ರಂತಹ ಹಿರಿಯರಿಗೆ  ಟಿಕೆಟ್ – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್….

ಬೆಂಗಳೂರು,ಜೂ,18,2020(www.justkannada.in):  ಬಿ.ಕೆ ಹರಿಪ್ರಸಾದ್ ಹಾಗೂ ನಾಸೀರ್ ಅಹಮದ್ ಅವರು ವಿದ್ಯಾರ್ಥಿ ನಾಯಕರಿಂದ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದವರು. ಅವರ ಹಿರಿತನ ಹಾಗೂ ಮಾರ್ಗದರ್ಶನದಿಂದ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲ ಒಮ್ಮತದಿಂದ ಅವರನ್ನು ವಿಧಾನ ಪರಿಷತ್ ಗೆ ಕಳುಹಿಸಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್ ಹಾಗೂ ನಾಸೀರ್ ಅಹಮದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿ ಫಾರ್ಮ್ ನೀಡಿದರು. ನಂತರ ನಾಯಕರ ತಂಡ ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…legislative-council-tickets-hariprasad-party-kpcc-president-dk-sivakumar

‘ವಿಧಾನ ಪರಿಷತ್ ಎಂದರೆ ಮೇಲ್ಮನೆ ಹಾಗೂ ಹಿರಿಯರ ಮನೆ. ಪಕ್ಷದ ಸಂಘಟನೆ ಹಾಗೂ ರಾಜ್ಯದ ಅನೇಕ ವಿಚಾರಗಳನ್ನು ಚರ್ಚೆ ಮಾಡಲು ಈ ಇಬ್ಬರು ಹಿರಿಯ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಲು ಒಮ್ಮತದಿಂದ ತೀರ್ಮಾನಿಸಿದ್ದೇವೆ. ಮೇಲ್ಮನೆ ಪ್ರವೇಶಿಸಲು ಸಾಕಷ್ಟು ಆಕಾಂಕ್ಷಿಗಳಿದ್ದರು. ಆದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಈ ಇಬ್ಬರು ನಾಯಕರನ್ನು ಆರಿಸಲು ತೀರ್ಮಾನಿಸಲಾಗಿದೆ.’

‘ನಮಗೆ ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲು ಹಿರಿತನದ ಅಗತ್ಯವಿದ್ದು, ಅದಕ್ಕಾಗಿ ಈ ನಾಯಕರನ್ನು ಆಯ್ಕೆ ಮಾಡುತ್ತಿದ್ದೇವೆ. ಇವರು ವಿದ್ಯಾರ್ಥಿ ನಾಯಕರಿಂದ ಹಿಡಿದು, ರಾಷ್ಟ್ರಮಟ್ಟದ ನಾಯಕರಾಗಿ ಅನೇಕ ರಾಜ್ಯಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 1983 ಹಾಗೂ 85ರಲ್ಲಿ ರಾಜಕೀಯ ಪ್ರವೇಶಿಸಿ, ವಿದ್ಯಾರ್ಥಿ ಘಟಕ, ಯೂಥ್ ಕಾಂಗ್ರೆಸ್, ಸೇವಾದಳ, ಎನ್ ಎಸ್ ಯೂಐ ಸೇರಿದಂತೆ ಎಲ್ಲ ಘಟಗಗಳಲ್ಲೂ ಇವರು ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದಾರೆ. ಪಕ್ಷಕ್ಕೆ ಬಲ ತುಂಬುವ ಉದ್ದೇಶದಿಂದ ನಮ್ಮ ಎಲ್ಲ ನಾಯಕರ ಜತೆ ಚರ್ಚಿಸಿದ ಹೈಕಮಾಂಡ್ ಈ ಹಿರಿಯ ನಾಯಕರಿಗೆ ಅವಕಾಶ ಕೊಟ್ಟಿದೆ.’

‘ಇವರೂ ಕೂಡ ಪಕ್ಷದ ಕಾರ್ಯಕರ್ತರೆ. ಹಿರಿಯರ ಮನೆಗೆ ಹಿರಿಯರ ಅವಶ್ಯಕತೆ ಇದ್ದು, ಹೀಗಾಗಿ ಪಕ್ಷ ಇವರಿಗೆ ಟಿಕೆಟ್ ಕೊಟ್ಟಿದೆ. ರಾಜ್ಯ ಸಭೆಯಲ್ಲೂ ಇದೇ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಕಳುಹಿಸಲಾಗಿದೆ.’

Key words: legislative council- Tickets – Hariprasad – party- KPCC President -DK Sivakumar.