ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿದ್ಯಾರ್ಥಿ ಸಮೂಹಕ್ಕೆ ಅಪಮಾನ: ಕ್ಷಮೆಗೆ ಆಗ್ರಹಿಸಿದ ಡಿ.ಕೆ ಶಿವಕುಮಾರ್.

ಬೆಂಗಳೂರು,ಮಾರ್ಚ್,2,2022(www.justkannada.in): ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ 90% ವಿದ್ಯಾರ್ಥಿಗಳು ಭಾರತದಲ್ಲಿ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾದರು ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜತೆ  ಮಾತನಾಡಿದ ಡಿ.ಕೆ ಶಿವಕುಮಾರ್, ಸಂಸದೀಯ ಸಚಿವರು ವಿದ್ಯಾರ್ಥಿಗಳನ್ನ ಅವಹೇಳನ ಮಾಡಿದ್ದಾರೆ. ಕಡಿಮೆ ಮಾರ್ಕ್ಸ್ ಬಂದಿದ್ದಕ್ಕೆ ಅಲ್ಲಿಗೆ ಹೋದ್ರು ಅಂತಾರೆ. ಪ್ರಧಾನಿಗಳು ಅದನ್ನೇ ಸಮರ್ಥಿಸಿಕೊಳ್ತಾರೆ. ಇದು ವಿದ್ಯಾರ್ಥಿ ಸಮೂಹಕ್ಕೆ ಮಾಡಿದ ಅಪಮಾನ. ಕೂಡಲೇ ಸಚಿವರು  ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ದಂಗೆ ಹೇಳ್ತಾರೆ. ಬದುಕಿರುವ ವಿದ್ಯಾರ್ಥಿಗಳನ್ನ ವಾಪಸ್ ಕರೆತರ್ತಿಲ್ಲ. ಅವರ ಹೆಣಗಳನ್ನ ಇಲ್ಲಿಗೆ ವಾಪಸ್ ತರ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ನಮ್ಮ ವಿದ್ಯಾರ್ಥಿ ಪ್ರಾಣತ್ಯಾಗ ಮಾಡಿದ್ದಾನೆ. ಡಾಕ್ಟರ್ ಮಾಡಬೇಕೆಂಬ ಆಸೆ ತಂದೆತಾಯಿಗಿದೆ. ಇಲ್ಲಿ ಕೋಟಿಗಟ್ಟಲೆ ಫೀ ಕಟ್ಟೋಕೆ ಆಗಲ್ಲ. ಹಾಗಾಗಿ ಬೇರೆ ದೇಶಗಳಿಗೆ ಕಳಿಸ್ತಾರೆ. ಬೆಂಗಳೂರಿಗೂ ಸಾವಿರಾರು ಜನ ಬರ್ತಾರೆ. ಜಯದೇವ ಆಸ್ಪತ್ರೆಗೆ ಬೇರೆಡೆಯಿಂದ ಬರ್ತಾರೆ. ಕಡಿಮೆ ಖರ್ಚಿನಲ್ಲಿ ಸೇವೆ ಪಡೆಯಲು ಬರ್ತಾರೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ವಿದ್ಯೆ ಕಲಿಯೋಕೆ ವಿದೇಶಕ್ಕೆ ಹೋಗ್ತಾರೆ. ಆದರೆ ನವೀನ್ ಅಲ್ಲಿಗೆ ಹೋಗಿ ಪ್ರಾಣತ್ಯಾಗ ಮಾಡಿದ್ದಾರೆ. ಅತಿಹೆಚ್ಚಿನ ಅಂಕ ಪಡೆದ್ರೂ ಅಲ್ಲಿಗೆ ಹೋಗಬೇಕಾಯ್ತು. ಇಲ್ಲಿ ಕಲಿಯೋಕೆ ಅವಕಾಶ ಸಿಗದೆ ಹೋಗಬೇಕಾಯಿತು ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ತಂದಿರೋದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ. ಜಾರಿಗೆ ತಂದಿರೋದು ನಾಗಪುರ ಶಿಕ್ಷಣ ನೀತಿಯನ್ನ. ಎಂಪಿ,ಯುಪಿ ಎಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ತರ್ತಿಲ್ಲ. ಆದರೆ ಕರ್ನಾಟಕದಲ್ಲಿ ತರೋಕೆ ಹೊರಟಿದ್ದಾರೆ. ರಾಮಕೃಷ್ಣಹೆಗಡೆ,ಮೊಯ್ಲಿ ಶಿಕ್ಷಣ ನೀತಿ ತಂದವರು. ಟಾಟಾ ಇಂಡಿಯನ್ ಇನ್ಸಿಟಿಟ್ಯೂಟ್ ತಂದಿದ್ದೇಕೆ. ಇಲ್ಲಿ ಉತ್ತಮ ಶಿಕ್ಷಣವಿದೆ ಎಂದು ತಂದಿದ್ದು.ನಿಮ್ಮ ಬಚ್ಚಲು ಬಾಯಿ ಮಂತ್ರಿ ರಾಷ್ಟ್ರೀಯತೆ ಬಗ್ಗೆ ಮಾತನಾಡಿದ್ರು. ಅದನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರೇ ವಿರೋಧಿಸಿದ್ರು. ಅದಕ್ಕೆ ನಾನು ಅವರನ್ನ ಅಭಿನಂಧಿಸ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಪಾದಯಾತ್ರೆ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಇದೊಂದು ಅನುಭವ. ಹೋರಾಟದ ಬಗ್ಗೆ ಅನುಭವ ಪಾಠವಾಗಲಿದೆ. ರೈತ,ಕನ್ನಡ,ಎಲ್ಲಾ ಸಂಘಟನೆಗಳು ಪಾಲ್ಗೊಳ್ಳಬೇಕು. ಹಲವು ರಾಜ್ಯಗಳ ಯೂತ್ ಅಧ್ಯಕ್ಷರು ಬರ್ತಿದ್ದಾರೆ. ನಮ್ಮ‌ಹೋರಾಟ ನೋಡೋಕೆ ಬರುತ್ತಿದ್ದಾರೆ ಎಂದರು.

Key words: kpcc-president-DK Shivakumar-education