ತೆರೆದ ಪುಸ್ತಕ ಪರೀಕ್ಷೆ ನಡೆಸಲು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ತೀರ್ಮಾನ

ಮೈಸೂರು, ಸೆಪ್ಟೆಂಬರ್ 09, 2020 (www.justkannada.in): ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

ಮುಕ್ತ ವಿವಿಯಲ್ಲಿ 2019-20ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ಸಾಲಿಗೆ ಉತ್ತೀರ್ಣಗೊಳಿಸಲು ಪರೀಕ್ಷೆಗಳನ್ನು ನಡೆಸುವ ಸಂಬಂಧ ಯು.ಜಿ.ಸಿ.  ನಿರ್ದೇಶನ ಮತ್ತು ಮಾರ್ಗಸೂಚಿಗನುಗುಣವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

2019-20ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದ ಪ್ರಥಮ ಹಾಗೂ ದ್ವಿತೀಯ ಬಿ.ಎ/ಬಿ.ಕಾಂ ಪದವಿಯ ವಿದ್ಯಾರ್ಥಿಗಳು, ಪ್ರಥಮ ಎಂ.ಎ/ಎಂ.ಸಿ.ಜೆ/ಎಂ.ಕಾಂ ಪದವಿಯ ವಿದ್ಯಾರ್ಥಿಗಳು, ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಎಂಎಸ್ಸಿ ಪದವಿಯ ವಿದ್ಯಾರ್ಥಿಗಳು ಮತ್ತು ದ್ವಿತೀಯ ಸೆಮಿಸ್ಟರ್ ಎಂಬಿಎ ಪದವಿಯ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್ಸೈಟ್ www.ksoumyuru.ac.in ನಲ್ಲಿ ಅರ್ಜಿ ಭರ್ತಿ ಮಾಡಿ ಪರೀಕ್ಷಾ ಶುಲ್ಕವನ್ನು ಪಾವತಿಸಿದ ನಂತರ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಕೇಂದ್ರ ಕಚೇರಿಗೆ ಅಂಚೆ ಮೂಲಕ ರವಾನಿಸಬೇಕು.

ಈ ಮೇಲ್ಕಂಡ ಕೋರ್ಸ್ ಗಳ ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ 23-09-2020 ಹಾಗೂ ರೂ. 200/- ದಂಡ ಶುಲ್ಕದೊಂದಿಗೆ 30.09.2020 ಕಡೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03. ಕಚೇರಿ ದೂರವಾಣಿ ಸಂಖ್ಯೆ:- 080 23448811, 9844506629, 9620395584, 7760848564 ಸಂಪರ್ಕಿಸಬಹುದು.