ಜೆಡಿಎಸ್ ಮತ್ತೆ ರಾಜ್ಯದಲ್ಲಿ ಪುಟಿದೇಳುತ್ತೆ ನೋಡಿ ಎಂದ ದೊಡ್ಡಗೌಡರು!

ಬೆಂಗಳೂರು, ಆಗಸ್ಟ್ 22, 2021 (www.justkannada.in): ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅಂತಾರೆ. 2023 ಕ್ಕೆ ಜೆಡಿಎಸ್ ಇರಲ್ಲ ಅಂತಾರೆ. ಹೀಗೆ ಯಾರ್ ಮಾತಾಡಿದ್ರು ಅಂತ ನಾನು ಮಾತಾಡೊಲ್ಲ. ಆದ್ರೆ ಹಾಗೆ ಹೇಳಿರೋರಿಗೆ ಎಚ್ಚರಿಕೆ ಕೊಡ್ತೀನಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಹೋರಾಟ ಮಾಡಿ ಪಕ್ಷದ ಅಸ್ಥಿತ್ವ ಉಳಿಸಿಕೊಂಡು ನಾವು ಅಧಿಕಾರಕ್ಕೆ ಬರೋಕೆ ಕೆಲಸ ಮಾಡ್ತೀವಿ. ವಿರೋಧಿಗಳಿಗೆ ಈ ಮೂಲಕ ತಿಳಿಸುತ್ತೇನೆ , ನಾನೂ ಹೋರಾಟದಲ್ಲಿ ಭಾಗಿಯಾಗ್ತೀನಿ. ಆದರೆ ಪಾದಯಾತ್ರೆ ಮಾಡೋದು ನನಗೆ ಈ ವಯಸ್ಸಿನಲ್ಲಿ ಕಷ್ಟ. ಆದ್ರೆ ಸಮಾರಂಭ ಇನ್ನಿತರ ಹೋರಾಟದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಪಾದಯಾತ್ರೆ ಪ್ರಾರಂಭ ಮಾಡ್ತೀವಿ. ನವೆಂಬರ್ ಅಧಿವೇಶನದ ವರೆಗೂ ನಾನು ಕುಳಿತುಕೊಳ್ಳೊಲ್ಲ. ಹೋರಾಟ ಮಾಡ್ತೀನಿ. ನಾನೇ ಎಲ್ಲಾ ಜಿಲ್ಲೆಗಳಿಗೂ ಹೋಗ್ತೀನಿ. ಹಳೆ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸಿಮೀತ ಅಂತಾರೆ. ಆದ್ರೆ ನಾನು‌ ಸಿಎಂ ಆಗಿದ್ದಾಗ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶಾಸಕರು ಗೆದ್ದಿದ್ದರು. ಆದ್ರು ಯಾವ್ ಯಾವ್ ಜಿಲ್ಲೆಗೆ ಹೋಗಬೇಕು ಅಂತ ನಿರ್ಧಾರ ಮಾಡಿ ಪ್ರವಾಸ ಮಾಡ್ತೀನಿ ಎಂದರು.

ಹಗುರ ಮಾತು ಸಲ್ಲದು

ನೆಹರು, ವಾಜಪೇಯಿ ಹೆಸರಿನಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ಕಿತ್ತಾಟಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದ ಗೌಡರು, ಯಾರು ಹಾಗೆ ಮಾತನಾಡಬಾರದು. ನೆಹರು, ವಾಜಪೇಯಿ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಅವರ ಬಗ್ಗೆ ಮಾತಾಡಿದ್ರೆ ಪಕ್ಷಕ್ಕೆ ಹೆಚ್ಚು ಶಕ್ತಿ‌ ಬರುತ್ತೆ ಅನ್ನೋ ಭ್ರಮೆಯಲ್ಲಿ ಯಾರು‌ ಇರಬಾರದು.  ನೆಹರು, ವಾಜಪೇಯಿ ಬಗ್ಗೆ ಮಾತಾಡಿದ ನಾಯಕರಿಗೆ ಈ ಮೂಲಕ ಮನವಿ ಮಾಡುತ್ತೀನಿ ಎಂದರು.