ಜೇಮ್ಸ್ ಚಿತ್ರ ತೆರವು ವಿಚಾರ: ಸಾಂಸ್ಕೃತಿಕ ರಾಯಭಾರಿಯಾದ ಕುಟುಂಬಕ್ಕೆ ಅವಮಾನ ಮಾಡಬಾರದು- ಹೆಚ್.ವಿಶ್ವನಾಥ್.

ಮೈಸೂರು,ಮಾರ್ಚ್,23,2022(www.justkannada.in): ಕಾಶ್ಮೀರಿ ಫೈಲ್ಸ್ ಸಿನಿಮಾಗಾಗಿ  ನಟ ದಿ.ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಎತ್ತಂಗಡಿ ಮಾಡಲು ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಮಾತನಾಡಿರುವ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಜೇಮ್ಸ್ ಎತ್ತಂಗಡಿ ಆಗಬಾರದು ಸಾಂಸ್ಕೃತಿಕ ರಾಯಭಾರಿಯಾದ ಕುಟುಂಬಕ್ಕೆ ಅವಮಾನ ಮಾಡಬಾರದು ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್,  ಡಾ.ರಾಜ್‌ ಕುಮಾರ್ ಕುಟುಂಬ ರಾಜ್ಯದಲ್ಲಿ ಸಾಂಸ್ಕೃತಿಕ ರಾಯಭಾರಿಯಂತೆ ಇದೆ. ಅವರ ಕುಡಿ ಡಾ.ಪುನೀತ್ ರಾಜ್‌ ಕುಮಾರ್ ನಿದನದ ನಂತರ ಜೇಮ್ಸ್ ಬಿಡುಗಡೆ ಆಗಿದೆ. ಇಡೀ ಕುಟುಂಬ ರಾಜ್ಯದ ಜನರ ಜೊತೆ ಬೆಸೆದುಕೊಂಡಿದೆ. ಈ ಸಂದರ್ಭದಲ್ಲಿ ಜೇಮ್ಸ್ ಎತ್ತಂಗಡಿ ಆಗಬಾರದು. ಜೇಮ್ಸ್ ಚಿತ್ರ ಚಿತ್ರಮಂದಿರಗಳಿಂದ ಎತ್ತಂಗಡಿ ಆದರೆ ರಾಜ್ಯದ ಜನ ರೊಚ್ಚಿಗೆಳುತ್ತಾರೆ ಎಂದರು.

ಆರ್‌ಆರ್‌ಆರ್ ಚಿತ್ರಕ್ಕಾಗಿ ಜೇಮ್ಸ್‌ ಎತ್ತಂಗಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಬೇಕು. ಕಾಶ್ಮೀರ್ ಫೈಲ್ಸ್ ಸಿನಿಮಾವೇ ಬೇರೆ. ಅದೊಂದು ರಕ್ತಸಿಕ್ತ ಚರಿತ್ರೆ. ಅದನ್ನ ನೋಡಬೇಕಾದವರು ಅದನ್ನು ನೋಡುತ್ತಾರೆ. ಮೊದಲು ನಮ್ಮ ಆದ್ಯತೆ ಕೊಡಬೇಕು ಎಂದರು.

ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಇಂತಹ ನಡೆ ಅಮಾನವೀಯ. ಮುಸ್ಲಿಮರು ಈ ದೇಶದ ಪ್ರಜೆಗಳು. ಅವರನ್ನು ಅಲ್ಲಿ ವ್ಯಾಪಾರಕ್ಕೆ ಬರಬೇಡಿ, ಇಲ್ಲ ಬರಬೇಡಿ ಎಂದು ಹೇಳುವುದು ಸಂವಿಧಾನ ವಿರೋಧಿ ನಿಲುವು. ಹೀಗೆ ಮಾಡಿದರೆ ಅವರು ಎಲ್ಲಿ ಹೋಗ್ತಾರೆ ನೀವೇ ಹೇಳಿ.  ರಾಜ್ಯ ಸರ್ಕಾರ ತಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಬರಬೇಕು. ಇಂತಹ ಬಹಿಷ್ಕಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

Key words: James-film-mysore – H.Vishwanath.