ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ಉದ್ಘಾಟನೆ.

ಮೈಸೂರು,ಮೇ,13,2022(www.justkannada.in): ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಅಭಿಮಾನಿಗಳು ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ಸ್ಥಾಪನೆ ಮಾಡಿದ್ದು  ಇದರ ಉದ್ಘಾಟನೆ ಇಂದು ಮೈಸೂರಿನಲ್ಲಿ ನೆರವೇರಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್  ಅನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಉದ್ಘಾಟನೆ ಮಾಡಿದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಸಿದ್ದರಾಮಯ್ಯನವರು ನಡೆದುಬಂದ ದಾರಿ,  ಕಾರ್ಯಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಬ್ರಿಗೇಡ್ ಸ್ಥಾಪನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಬ್ರಿಗೇಡ್ ರಾಜ್ಯಾಧ್ಯಕ್ಷ ಹಿನಕಲ್ ಉದಯ್, ಉಪಾಧ್ಯಕ್ಷ ಜೆ.ಮಹದೇವ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಬ್ರಿಗೇಡ್ ಉದ್ಘಾಟನೆ ಬಳಿಕ ಮಾತನಾಡಿದ ಆರ್.ಧೃವನಾರಾಯಣ್, ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯವರು ಎಂಬುದೇ ನಮಗೆ ಹೆಮ್ಮೆ. ದೇವರಾಜ ಅರಸು ಬಳಿಕ ಅತ್ಯುತ್ತಮ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ.5 ವರ್ಷ ಅಧಿಕಾರ ಪೂರೈಸಿ ಉತ್ತಮ ಆಡಳಿತ ನೀಡಿದರು. 44 ವರ್ಷಗಳು ಯಾವುದೇ ಕಪ್ಪುಚುಕ್ಕಿ ಇಲ್ಲದೇ ರಾಜಕಾರಣ ಮಾಡಿದ್ದಾರೆ. ತಾಲ್ಲೂಕು ಬೋರ್ಡ್ ಸದಸ್ಯರಿಂದ ಶಾಸಕರಾಗಿ, ಮಂತ್ರಿ, ಡಿಸಿಎಂ,‌ ಸಿಎಂ, ಇದೀಗ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿಗೆ ವರುಣಾ ನಾಲೆ ಅನುಷ್ಠಾನಗೊಳಿಸಿದ್ದೇ ಸಿದ್ದರಾಮಯ್ಯ ಎಂದು ಗುಣಗಾನ ಮಾಡಿದರು.

ಬೆಂಗಳೂರಿನಿಂದ ಬಳ್ಳಾರಿ ಪಾದಯಾತ್ರೆ ನಡೆಸಿದ್ದೇ ಇತಿಹಾಸ. ಗಣಿಲೂಟಿ‌ ಮಾಡಿದವರನ್ನು ಜೈಲಿಗೆ ಹಾಕ್ಸಿದ್ರು. 5 ವರ್ಷ ಯಾವುದೇ ಗಲಭೆಗೆ ಅವಕಾಶ ಕೊಡದೆ ಕಾನೂನು ಸುವ್ಯವಸ್ಥೆ ನಿರ್ವಹಿಸಿದರು. ಕಾಂಗ್ರೆಸ್ ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಕೆಲಸಗಳನ್ನು ಮೆಚ್ಚಿದೆ. ಸದನದಲ್ಲಿ ಯಾವುದೇ ವಿಚಾರದ ಬಗ್ಗೆಯೂ ಸುಲಲಿತವಾಗಿ ಮಾತನಾಡುವ ನಾಯಕ.ನೂತನ ಶಾಸಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂದು ಅವರ ಹೆಸರಿನಲ್ಲಿ ಇಂದು ಬ್ರಿಗೇಡ್ ಪ್ರಾರಂಭ ಮಾಡುತ್ತಿರುವುದು ಸಂತೋಷ. ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ‌ಮಾಡಿ ಎಂದು ಆರ್.ಧ್ರುವನಾರಾಯಣ್ ಹೇಳಿದರು.

Key words: Inauguration -All -Karnataka -Siddaramaiah -Fans -Brigade