ಸಿಎಎ ಪರ ಇದ್ದ ಕಾಂಗ್ರೆಸ್‌ ನಿಂದ ಈಗ ಅಪಪ್ರಚಾರ: ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ – ಡಿಸಿಎಂ ಡಾ. ಅಶ್ವತ್ಥನಾರಾಯಣ್ ಕಿಡಿ…

ರಾಯಚೂರು,ಫೆ,25,2020(www.justkannada.in): ಸಿಎಎ ಹೊಸ ವಿಷಯ ಅಲ್ಲ, ಸ್ವಾತಂತ್ರ್ಯ ನಂತರದಲ್ಲಿ ಜವಾಹರಲಾಲ್‌ ನೆಹರು ಅವರಿಂದ ಆರಂಭಿಸಿ ಮನಮೋಹನ್‌ ಸಿಂಗ್‌ವರೆಗೆ ಎಲ್ಲರೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಆದರೆ, ಈಗ ಅವರ ಪಕ್ಷದವರೇ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ರಾಯಚೂರಿನಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಡಾ. ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿದರು.

“ನಮ್ಮ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹೊಸದಾಗಿ ಚರ್ಚೆ ಆಗುತ್ತಿಲ್ಲ. ಆದರೆ ಈಗ ಈ ಬಗ್ಗೆ ಅಪಪ್ರಚಾರ ನಡೆಸಿ ಭಯದ ವಾತಾವರಣ ಮೂಡಿಸಿದ್ದಾರೆ,”ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

“ಸೋದರರಂತೆ ಬಾಳುತ್ತಿರುವ  ಅಲ್ಪಸಂಖ್ಯಾತರನ್ನು ದೇಶದದಿಂದ ಹೊರಗೆ ಹಾಕಲು ಸಾಧ್ಯವೇ? ಯಾವುದೇ ಕಾರಣಕ್ಕೂ ನಮ್ಮ ದೇಶದಲ್ಲಿ ಇಂಥ ಘಟನೆ ನಡೆಯದು. ಪ್ರತಿಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡಿ, ಗೊಂದಲ ಸೃಷ್ಟಿಸುತ್ತಿವೆ. ಇದರಿಂದ ಸಮಾಜದಲ್ಲಿ ವೈಮನಸ್ಯ ಮೂಡುತ್ತಿದೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ.  ಜಾತಿ, ಧರ್ಮ ಆಧರಿತ ವ್ಯವಸ್ಥೆಯಲ್ಲಿ ಎಲ್ಲವೂ ಒಮ್ಮೆಲೇ ಸರಿ ಪಡಿಸಲಾಗದು. ಕಾಲವೇ ಇದನ್ನು ಸುಧಾರಿಸಬೇಕು,”ಎಂದು ಅವರು ಅಭಿಪ್ರಾಯಪಟ್ಟರು.

ಶೀಘ್ರದಲ್ಲೇ ರಾಯಚೂರು ವಿವಿ ಆರಂಭ

ರಾಯಚೂರಿನಲ್ಲಿ ಶೀಘ್ರದಲ್ಲೇ ವಿಶ್ವವಿದ್ಯಾಲಯ ಆರಂಭಿಸಲಾಗುವುದು ಎಂದು ಘೋಷಿಸಿದ ಡಾ. ಅಶ್ವತ್ಥನಾರಾಯಣ, “ಈಗಾಗಲೇ 250 ಎಕರೆ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತ ಕೇಂದ್ರ ಇರುವುದರಿಂದ ಹೊಸ ವಿವಿ ಸ್ಥಾಪನೆ ಕಷ್ಟವಿಲ್ಲ,” ಎಂದರು.

“ವಿವಿ ಸ್ಥಾಪನೆ ಸಂಬಂಧ ಹಳೆಯ ಪ್ರಸ್ತಾವನೆ ತಿರಸ್ಕೃತಗೊಂಡ ನಂತರ,  ಇದ್ದ ಆಕ್ಷೇಪಗಳನ್ನು ಸರಿಪಡಿಸಿ ಹೊಸ ಪ್ರಸ್ತಾವನೆಗೆ ಸಂಪುಟದ ಅನುಮೋದನೆ ಪಡೆದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.  ನಿಮ್ಮೆಲ್ಲರ  ಅಪೇಕ್ಷೆಯಂತೆ ಈ ಸಾಲಿನಲ್ಲೇ ವಿವಿ ಸ್ಥಾಪನೆ ಆಗುವುದು. ಇಂಥ ಒಳ್ಳೆಯ ಕೆಲಸಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರೋತ್ಸಾಹ ಇದ್ದೇ ಇರುತ್ತದೆ,”ಎಂದು ಅವರು ತಿಳಿಸಿದರು.

Key words: impropriety –CAA- Congress-raichur-DCM Dr. Ashwath anarayan