ಮೈಸೂರಿನಲ್ಲಿ  ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿತ: ಅಪಾಯದಿಂದ ಪಾರು…

ಮೈಸೂರು,ಜು,25,2019(www.justkannada.in): ಮಳೆಗೆ ನೆನೆದು ಶಿಥಿಲಗೊಂಡಿದ್ದ ಹೆಂಚಿನ ಮನೆಯೊಂದು ಕುಸಿದುಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಪಾಲಿಕೆಯ ವ್ಯಾಪ್ತಿಯ ವಾರ್ಡ ನಂ.38ರ ಗಾಯತ್ರಿಪುರಂನಲ್ಲಿ ಈ ಅವಘಡ ಸಂಭವಿಸಿದೆ, ಇಲ್ಲಿನ ತಿಮ್ಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿರುವುದು. ಭಾರಿ ಮಳೆಯಿಂದಾಗಿ ತಿಮ್ಮಯ್ಯ ಎಂಬವರ ನಾಡ ಹೆಂಚಿನ ಮನೆ ಶಿಥಿಲಗೊಂಡಿತ್ತು. ಇಂದು ಬೆಳಗಿನ ಜಾವ 4 ಗಂಟೆಯ ವೇಳೆಯಲ್ಲಿ ಸಂಪೂರ್ಣವಾಗಿ ಕುಸಿದಿದೆ.

ತಿಮ್ಮಯ್ಯ ಅವರು ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸವಿದ್ದು, ಬೆಳಗಿನ ಜಾವ ನಾಲ್ಕುಗಂಟೆಯ ಸುಮಾರಿಗೆ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ   ನೋಡಿದಾಗ ಮನೆ ಇದ್ದಕಿದ್ದಂತೆ ಸಂಪೂರ್ಣವಾಗಿ ನೆಲಕಚ್ಚಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಇದ್ದ ಒಂದು ಮನೆಯೂ ಕುಸಿದು ಬಿದ್ದಿರುವುದಕ್ಕೆ ತಿಮ್ಮಯ್ಯ ಅವರ ಕುಟುಂಬ ಕಂಗಾಲಾಗಿದ್ದು,ನೆರವಿನ ನಿರೀಕ್ಷೆಯಲ್ಲಿದೆ. ಇನ್ನು ಸ್ಥಳಕ್ಕೆ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: House- collapses – Mysore -after –rain- escape -danger