ರೈಲ್ವೆ ಹಳಿ ಮಾರ್ಗ ಬದಲಾಯಿಸುವ ಸರ್ಕಾರದ ನಿರ್ಧಾರದಿಂದ ಯಾತನೆಯಲ್ಲಿ 1 ಸಾವಿರ ರೈತರ ಬದುಕು.

ಬೆಂಗಳೂರು, ಡಿಸೆಂಬರ್ 4, 2021 (www.justkannada.in): ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯ ಮೇರೆಗೆ, ತಮ್ಮ ಸ್ವಂತ ಜಮೀನುಗಳಲ್ಲಿ ಕೃಷಿಯನ್ನು ಮಾಡುವುದನ್ನು ನಿಲ್ಲಿಸಿದ್ದಂತಹ ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಸುಮಾರು ೧,೦೦೦ ರೈತರು ಯಾರ ಗಮನಕ್ಕೂ ಬಾರದೆ ಸುಮಾರು ಎರಡು ದಶಕಗಳಿಂದ ಯಾತನೆ ಅನುಭವಿಸುತ್ತಿದ್ದಾರೆ.

ಬಹುಪಾಲು ಸ್ವಂತ ಜಮೀನುಗಳನ್ನು ಹೊಂದಿರುವಂತಹ ಈ ರೈತರನ್ನು ೧೯೯೬ರಿಂದಲೂ ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ನಿರುತ್ಸಾಹಗೊಳಿಸಲಾಗಿದೆ. ಕಡೂರು ಹಾಗೂ ಸಕಲೇಶಪುರಗಳ ನಡುವೆ ಹೊಸ ರೈಲು ಮಾರ್ಗವನ್ನು ನಿರ್ಮಿಸುವ ಸಂಬಂಧ ಅಂದಿನ ಸರ್ಕಾರ ಸಮೀಕ್ಷೆ ಕೈಗೊಂಡು ಅದಕ್ಕಾಗಿ ಅಗತ್ಯವಿರುವಂತಹ ಭೂಮಿಯನ್ನು ಗುರುತಿಸಿತು. ಆದರೆ ನಂತರದ ದಿನಗಳಲ್ಲಿ ಸರ್ಕಾರ ತನ್ನ ಸ್ವಂತ ಏಕಮುಖ ನಿರ್ಧಾರದಿಂದ ಬೇಲೂರು-ಸಕಲೇಶಪುರ ನಡುವಿನ ಆ ಹೊಸ ರೈಲು ಮಾರ್ಗವನ್ನು ಕೈಬಿಟ್ಟ ಕಾರಣದಿಂದಾಗಿ ಈ ಎಲ್ಲಾ ರೈತರ ಬದುಕು ತತ್ತರಿಸಿದೆ.

ಹತಾಶಗೊಂಡಿರುವ ಅಸಹಾಯಕ ರೈತರು ಈ ಯೋಜನೆಯನ್ನು ಕೈಬಿಡದಿರುವಂತೆ ಸರ್ಕಾರವನ್ನು ಕೋರುತ್ತಿದ್ದಾರೆ, ಅಥವಾ ಕನಿಷ್ಠ ತಮಗೆ ಉಂಟಾಗಿರುವ ನಷ್ಟವನ್ನಾದರೂ ತುಂಬಿಕೊಡುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ರೈತರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಈವರೆಗೆ ಎರಡು ವಿಚಾರಣೆಗಳು ನಡೆದಿವೆ. “ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೂ ನೋಟಿಸ್‌ಗಳನ್ನು ನೀಡಲಾಗಿದೆ,” ಎನ್ನುತ್ತಾರೆ ರೈತರ ಪರವಾಗಿ ಕಟ್ಟಳೆಯನ್ನು ಹೂಡಿರುವ ವಕೀಲ ಕೆ. ಶ್ರೀನಿವಾಸ್ ಗೌಡ.

ಈ ಸಂಬಂಧ ತಮ್ಮ ಅಳಲನ್ನು ತೋಡಿಕೊಂಡಿರುವ ಸಕಲೇಶಪುರ ತಾಲೂಕಿನ ರೈತ ಹೆಚ್.ಸಿ. ನಂದೀಶ್ ಅವರು, “ಈ ರೈಲು ಮಾರ್ಗ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಯೋಜನೆಯಾಗಿತ್ತು. ಆಗ ಅವರು ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಆಗ ಈ ಹೊಸ ರೈಲು ಮಾರ್ಗದ ಆಶ್ವಾಸನೆಯನ್ನು ನೀಡಿದ್ದರು. ಅದಕ್ಕಾಗಿ ಕೇಂದ್ರ ರೈಲ್ವೆ ಆಯವ್ಯಯದಲ್ಲಿ ಅನುದಾನವನ್ನೂ ಘೋಷಿಸಲಾಗಿತ್ತು. ಹಾಗಾಗಿ ನಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಿರುವಂತೆ, ಅಥವಾ ಮತ್ಯಾವುದಾದರೂ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳದಿರುವಂತೆ ಅಥವಾ ಜಮೀನನ್ನು ಮಾರಾಟವೂ ಮಾಡದಿರುವಂತೆ ನಿರ್ಬಂಧಿಸಲಾಗಿತ್ತು. ಆದರೆ ೨೦೧೯ರಲ್ಲಿ ಒಮ್ಮೆಲೆ ರಾಜ್ಯ ಸರ್ಕಾರ ಈ ಬೇಲೂರು-ಸಕಲೇಶಪುರ ನಡುವಿನ ರೈಲು ಮಾರ್ಗ ವಜಾಗೊಳಿಸಿ ಅಧಿಸೂಚನೆಯನ್ನು ಹೊರಡಿಸಿತು,” ಎಂದರು.

ಈ ಸಂಬಂಧ ಲಭ್ಯವಿರುವ ದಾಖಲಾತಿಗಳು ಸಹ, ಈ ರೈಲ್ವೆ ಮಾರ್ಗವನ್ನು ಬದಲಾಯಿಸದಿರುವಂತೆ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರಿಗೆ ರೈತರು ಪತ್ರವನ್ನು ಬರೆದಿರುವುದು ಕಂಡು ಬಂದಿದೆ. “೧೯೯೯ರಿಂದಲೂ ಈ ರೈಲು ಮಾರ್ಗವನ್ನು ಬದಲಾಯಿಸುವ ಪ್ರಯತ್ನಗಳಾಗುತ್ತಿವೆ. ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರು ಅಂದಿನ ಕೇಂದ್ರ ರೈಲ್ವೆ ಸಚಿವರಾಗಿದ್ದ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದು ಈ ಮಾರ್ಗದ ಬದಲಾವಣೆಯನ್ನು ಕೋರಿದ್ದರು. ಆದರೆ, ಮೂಲ ಯೋಜನೆಯ ಪ್ರಕಾರ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿರುವುದಾಗಿ ಉತ್ತರ ದೊರೆಯಿತು,” ಎಂದು ಸಕಲೇಶಪುರದ ನೊಂದ ರೈತ ಎಸ್.ವಿ. ಪರಮೇಶ್ವರಯ್ಯ ಅವರು ತಿಳಿಸುತ್ತಾರೆ.

ರೈತರು ವಿವರಿಸುವಂತೆ ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳ ಭಾಗಗಳಲ್ಲಿ ಭತ್ತ, ಕಾಫಿ ಮತ್ತು ಮೆಣಸನ್ನು ಹೆಚ್ಚು ಬೆಳೆಯುವ ರೈತರಿದ್ದಾರೆ. ಆದರೆ ಈ ಹೊಸ ರೈಲು ಮಾರ್ಗಕ್ಕಾಗಿ ಭೂಮಿಯ ಸಮೀಕ್ಷೆಯನ್ನು ನಡೆಸಿದಾಗಿನಿಂದ ಈ ರೈತರು ಸಾಗುವಳಿ ಮಾಡದಿರುವಂತೆ ನಿರ್ಬಂಧಿಸಲಾಗಿದೆ. ಮೂಲ ಯೋಜನೆಯನ್ನು ಬದಲಾಯಿಸುವ ನಿರ್ಧಾರದ ಹಿಂದೆ ಕೆಲವು ಸ್ಥಳೀಯ ರಾಜಕಾರಣಿಗಳ ಸ್ವಹಿತಾಸಕ್ತಿ ಇದೆ ಎನ್ನುವುದು ಕೆಲವು ರೈತರ ಆರೋಪವಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: government’s- decision -change – railway line – save – lives – thousand -farmers – distress