ಶಾಲೆಗಳಲ್ಲಿ ‘ಮಳೆಬಿಲ್ಲು’ ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರದಿಂದ ಸುತ್ತೋಲೆ.

ಬೆಂಗಳೂರು,ಮೇ,14,2022(www.justkannada.in): 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಳೆಬಿಲ್ಲು ಕಾರ್ಯಕ್ರವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಆದೇಶಿಸಿರುವ ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಯೋಜನಾ ನಿರ್ದೇಶಕರಾದ ಪಲ್ಲವಿ ಆಕುರಾತಿ, ಹಿಂದಿನ ಎರಡು ವರ್ಷಗಳಲ್ಲಿ ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ, ಆದ್ದರಿಂದ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಕ್ಕಳಲ್ಲಿ ಉತ್ಸಾಹವನ್ನು ಹುರಿದುಂಬಿಸಿ, ಅವರಿಗೆ ಉತ್ತಮ ಕಲಿಕಾ ಅನುಭವವನ್ನು ನೀಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರವು 2022-2023 ನೇ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಿದ್ದು, ಕಲಿಕಾ ಚೇತರಿಕೆ ಎಂಬ ವಿನೂತನ ಉಪಕ್ರಮವನ್ನು ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 1 ರಿಂದ 9 ನೇ ತರಗತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಸದರಿ ಉಪಕ್ರಮದ ಪೂರ್ವಸಿದ್ಧತೆಗಾಗಿ ಕಲಿಕಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಶಾಲಾ ಆರಂಭವನ್ನು ಮಗು ಹಬ್ಬದಂತೆ ಆಚರಿಸುವ ಸಲುವಾಗಿ ಮಕ್ಕಳ ಸ್ನೇಹಿ ಚಟುವಟಿಕೆಗಳಿಂದ ಶಾಲೆಯನ್ನು ಆರಂಭಿಸುವುದು. ಈ ನಿಟ್ಟಿನಲ್ಲಿ ಮಗು ಸಂತಸದಿಂದ ಆನಂದಿಸಿ ಅನುಭವಿಸುವಂತೆ ಮಾಡುವ ಚಟುವಟಿಕೆಗಳನ್ನು ನಡೆಸುತ್ತಾ ಹೋಗುವಂತೆ ಅನೂಕೂಲವಾಗಿಸಲು ಶಾಲಾ ಪ್ರಾರಂಭದ ಮೊದಲ ಎರಡು ವಾರಗಳಿಗೆ “ಮಳೆಬಿಲ್ಲು ” ಕಾರ್ಯಕ್ರಮವನ್ನು ಯೋಜಿಸಿದೆ.

ಕಾರ್ಯಕ್ರಮವನ್ನು ಶಾಲೆಗಳಲ್ಲಿ ಯೋಜಿಸಲು ಸಲಹಾತ್ಮಕ ಚಟುವಟಿಕೆಗಳನ್ನು ಒಳಗೊಂಡ ಮಳಬಿಲ್ಲು ಶಿಕ್ಷಕರ ಕೈಪಿಡಿಯನ್ನು ಒದಗಿಸಿದ್ದು, ಅದರಂತೆ ಕ್ರಮವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

“ಮಳೆಬಿಲ್ಲು” ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಯೋಜಿಸಲು ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಅನುಸರಿಸಬೇಕಾದ ಕ್ರಮಗಳು ಈ ಕೆಳಕಂಡಂತಿವೆ..

1 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಆಯಾ ವಯೋಮಾನಕ್ಕನುಗುಣವಾಗಿ ಆಯಾ ಶಾಲಾ ಭೌಗೋಳಿಕ ಸನ್ನಿವೇಶಗಳಿಗೆ ಅನುಗುಣವಾಗಿ ಮಳೆಬಿಲ್ಲು ಚಟುವಟಿಕೆಗಳನ್ನು ಆಯೋಜಿಸುವುದು.

ವಿದ್ಯಾರ್ಥಿಗಳಿಗೆ ಯಾವುದೇ ದೈಹಿಕ ಮತ್ತು ಮಾನಸಿಕ ತೊಂದರೆ ಉಂಟಾಗದಂತೆ ಶಿಸ್ತಿನಿಂದ ಚಟುವಟಿಕೆಗಳನ್ನು ಆಯೋಜಿಸುವುದು ಹಾಗೂ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪ್ರತ್ಯಕ್ಷ ಅನುಭವಗಳನ್ನು ಪಡೆಯಲು ಹೆಚ್ಚು ಆದ್ಯತೆ ಒದಗಿಸುವುದು.

ಸಂಬಂಧಿಸಿದ ಯೋಜನೆಯನ್ನು ಮೊದಲೇ ಸಿದ್ಧಪಡಿಸಿಕೊಂಡು, ಯಾವುದೇ ಆರ್ಥಿಕ ಹೊರೆ ಆಗದಂತೆ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಚಟುವಟಿಕೆಗಳನ್ನು ಆಯೋಜಿಸುವುದು.

ಚಟುವಟಿಕೆ ಪ್ರಾರಂಭಿಸುವ ಮುನ್ನ ಅಗತ್ಯ ಸೂಚನೆಗಳನ್ನು ನೀಡಿ ಎಲ್ಲಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವುದು.

ಮಕ್ಕಳಲ್ಲಿ ಅಂಜಿಕ, ಹಿಂಜರಿಕೆ ಮತ್ತು ಭಯ ಬರದಂತೆ ಮುಕ್ತವಾಗಿ ಅಭಿವ್ಯಕ್ತಿಸಲು ಸೂಕ್ತ ಮಾರ್ಗದರ್ಶನ ನೀಡುವುದು.

“ಮಳೆಬಿಲ್ಲು ಕೈಪಿಡಿಯಲ್ಲಿ ಸೂಚಿಸಿರುವ ತರಗತಿವಾರು ಆಟ/ಚಟುವಟಿಕೆಗಳನ್ನು ವಿವಿಧ ತರಗತಿಗಳಿಗೆ, ವಯೋಮಾನಕ್ಕೆ ಅನುಗುಣವಾಗಿ ಸಂಯೋಜಿಸಿ ನಿರ್ವಹಿಸುವುದು.

“ಮಳೆಬಿಲ್ಲು”ಕೃಪಿಡಿಯಲ್ಲಿ ಸೂಚಿಸಿರುವ ಆಟಗಳು/ಚಟುವಟಿಕೆಗಳು ಮಕ್ಕಳು ಶಾಲಾ ಪರಿಸರಕ್ಕೆ ಹೊಂದಿಕೊಳ್ಳಲು ರೂಪಿಸಲಾಗಿದೆ. ಹಾಗಾಗಿ ಈ ಆಟಗಳ ಮೂಲಕ ಯಾವುದೇ ಸ್ಪರ್ಧೆಗಳನ್ನು ನಡೆಸುವಂತಿಲ್ಲ ಹಾಗೂ ಬಹುಮಾನಗಳಿಗೆ ಅವಕಾಶ ಇರುವುದಿಲ್ಲ.

ಯೋಜನೆ/ಚಟುವಟಿಕೆ ತಯಾರಿಕಾ ಹಂತದಲ್ಲಿ ಪ್ರತೀ ಸಂದರ್ಭದಲ್ಲಿಯೂ, ಕಾರ್ಯಕ್ರಮ ನಡೆಸುವಾಗ ಶಿಕ್ಷಕರು ಜೊತೆಗಿದ್ದು ಚಟುವಟಿಕೆಗಳನ್ನು ನಿರ್ವಹಿಸುವುದು.

ಮೇಲಿನ ಎಲ್ಲಾ ಕ್ರಮಗಳನ್ನು ಅನುಸರಿಸಿ “ಮಳೆಬಿಲ್ಲು “ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿ. 2022-2023ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳನ್ನು ಸನ್ನದ್ಧರನ್ನಾಗಿಸಲು ಕ್ರಮ ಕೈಗೊಳ್ಳುವುದು.

Key words: government -implementation –malebillu- program -schools.

ENGLISH SUMMARY…

Govt. circular to implement ‘Malebillu’ program in schools
Bengaluru, May 14, 2022 (www.justkannada.in): The Government of Karnataka has issued a circular directing implementation of ‘Malebillu’ program in all the schools for the year 2022-23.
Pallavi Akurati, State Program Director, Samagra Shikshana Karnataka, has issued the orders has mentioned that the school children have not been able to take part in school activities from the last two years. Hence, there is a need to encourage the children so that they will adopt to the school environment soon and provide them a good learning environment. In this regard the Government of Karnataka has declared the academic year 2022-23 as ‘Kalika Chetarike Varsha’ and will be implemented in all the government primary and high schools across the state.
Keywords: Government of Karnataka/ Education Department/ Malebillu program