ಪದೇ ಪದೇ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ.

ರಾಮನಗರ,ಮಾರ್ಚ್,25,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ  ರಾಜ್ಯಕ್ಕೆ  ಪದೇ ಪದೇ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕೋವಿಡ್ ಇದ್ದಾಗ ಬರಲಿಲ್ಲ, ಪ್ರವಾಹ ಬಂದಾಗ ಬರಲಿಲ್ಲ. ಈಗ ಮಾತ್ರ ಕರ್ನಾಟಕದ ಬಗ್ಗೆ ಪ್ರೀತಿ ಹುಕ್ಕಿಹರಿಯುತ್ತಿದೆ. ಕೇವಲ ಬರುತ್ತಾರೆ, ಹೋಗುತ್ತಾರೆ ಅಷ್ಟೇ. ಶಾಸಕರು, ಸಚಿವರು ಮಾಡುವ ಉದ್ಘಾಟನೆಗೆ ಮೋದಿ ಕರೆಸುತ್ತಿದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗುತ್ತಾರೆ ಅಷ್ಟೇ  ಎಂದು ಕಿಡಿಕಾರಿದರು.

ಚನ್ನಪಟ್ಟಣದ ಕಾರ್ಯಕರ್ತರು ನನಗೆ ರಾಜ್ಯ ಕಟ್ಟುವ ಕೆಲಸ ಕೊಟ್ಟಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ ಜನರು ನನ್ನ ಮನೆ ಮಗನಂತೆ ನೋಡುತ್ತಿದ್ದಾರೆ. ಯಾರು ಏನೇ ಅಪಪ್ರಚಾರ ಮಾಡಿದರು ಜನ ಕಿವಿಕೊಡಲ್ಲ. ಜನರೇ ನನಗೆ ರಕ್ಷಣೆ ನೀಡುತ್ತಾರೆ. ಎಲ್ಲವನ್ನೂ ಜನರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್​ನಿಂದ ಯಾರೇ ನಿಂತರೂ ತಲೆಕೆಡಿಸಿಕೊಳ್ಳಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: Former CM-HD Kumaraswamy –tong- Prime Minister- Modi- visit – state.